ಮೈಸೂರು: ವಿಶ್ವನಾಥ್ ಅವರು ಪಕ್ಷ ದ್ರೋಹ ಮಾಡಿ ಮುಂಬೈಗೆ ಹೋಗಿ ಕುಳಿತಿದ್ದು ಸುಳ್ಳಾ? ಯಾವುದೇ ಹಣ ಪಡೆಯದೆ ಹೋಗಿದ್ದಾರೆಯೇ? ಈ ವಿಚಾರದಲ್ಲಿ ಚರ್ಚೆಗೆ ನಾನು ಸಿದ್ಧ ಎಂದು ಶಾಸಕ ಸಾ.ರಾ.ಮಹೇಶ್ ಸವಾಲು ಹಾಕಿದರು.
ದೇವೇಗೌಡರ ಕುಟುಂಬಕ್ಕೆ ವಿಷ ಉಣಿಸಿದವರು ಅನೇಕರಿದ್ದಾರೆ. ಆದರೆ, ನೀವು ಕಾರ್ಕೋಟಕ ವಿಷ. ಜನರಿಗೆ ನಿಮ್ಮ ಗೋಮುಖ ವ್ಯಾಘ್ರ ಮುಖದ ದರ್ಶನವಾಗಬೇಕಿದೆ ಎಂದು ವಾಗ್ದಾಳಿ ನಡೆಸಿದರು.
ಮೂಲೇ ಗುಂಪಾಗಿದ್ದ ಅವರನ್ನು ಪಕ್ಷಕ್ಕೆ ಕರೆತಂದೆ. ಇದರಿಂದ ಹಿರಿಯ ರಾಜಕಾರಣಿಗೆ ಉತ್ತಮ ನೆಲೆ ಕಲ್ಪಿಸುವ ಉದ್ದೇಶ ಇತ್ತು. ಆದರೆ, ವಿಶ್ವನಾಥ್ ಈ ರೀತಿಯ ಕಾರ್ಕೋಟಕ ವಿಷ ಎಂದು ಗೊತ್ತಿರಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೇವೇಗೌಡರ ಮನೆಯಲ್ಲಿ ಕುಳಿತು ನೀವು ಏನು ಹೇಳಿದ್ರಿ? ಸಿದ್ದರಾಮಯ್ಯರಿಂದ ಸಾಕಷ್ಟು ನೊಂದಿದ್ದೇನೆ. ನನಗೆ ಯಾವುದೇ ಅಧಿಕಾರ ಬೇಡ, ಸಚಿವ ಸ್ಥಾನ ಬೇಡ. ನನ್ನ ಕೊನೆಗಾಲದಲ್ಲಿ ಕೇವಲ ಶಾಸಕನನ್ನಾಗಿ ಮಾಡಿ ಸಾಕು ಎಂದಿದ್ರಿ. ಅದೆಲ್ಲವೂ ಈಗ ಮರೆತು ಹೋಯಿತೇ ಎಂದು ಪ್ರಶ್ನಿಸಿದರು.