ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಸ್ವೀಕರಿಸುವುದಿಲ್ಲ: ಎಸ್‌.ರಘುನಂದನ

Last Updated 19 ಜುಲೈ 2019, 10:50 IST
ಅಕ್ಷರ ಗಾತ್ರ

ಬೆಂಗಳೂರು: 2018ನೇ ಸಾಲಿನ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಗಿರುವರಂಗ ನಿರ್ದೇಶಕ ಎಸ್‌. ರಘುನಂದನ ಅವರು ಪ್ರಶಸ್ತಿಸ್ವೀಕರಿಸುವುದಿಲ್ಲ ಎಂದು ಹೇಳಿದ್ದಾರೆ.

ಪ್ರಶಸ್ತಿಯನ್ನು ಯಾಕೆ ಸ್ವೀಕರಿಸುವುದಿಲ್ಲ ಎಂಬುದಕ್ಕೆ ರಘನಂದನ ಅವರು ನೀಡಿದ ಕಾರಣ ಇಲ್ಲಿದೆ.

ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕುರಿತ ಹೇಳಿಕೆ

ಸಂಗೀತ ನಾಟಕ ಅಕಾಡೆಮಿ ಒಂದು ಸ್ವಾಯತ್ತ ಸಂಸ್ಥೆಯಾಗಿದ್ದು ತಾನು ಶುರುವಾದಂದಿನಿಂದಲೂ ತನ್ನ ಸ್ವಾಯತ್ತತೆಯನ್ನು ಬಹಳಮಟ್ಟಿಗೆ ಕಾಪಾಡಿಕೊಂಡು ಬಂದಿದೆ. ಅಂಥ ಅಕಾಡೆಮಿಯು 2018ರ ಇಸವಿಯ ತನ್ನ ಪ್ರಶಸ್ತಿಯನ್ನು, ಬೇರೆ ಹಲವರಿಗೆ ನೀಡುವುದರೊಂದಿಗೆ, ನನಗೂ ನೀಡಿದ್ದಕ್ಕಾಗಿ ಅಕಾಡೆಮಿಗೆ ಕೃತಜ್ಞನಾಗಿದ್ದೇನೆ.

ಆದರೆ, ಈವತ್ತು ದೇಶದ ಹಲವು ಕಡೆ, ಮತಧರ್ಮದ ಹೆಸರಿನಲ್ಲಿ, ಪೊರೆಯುವ ದೇವರ ಹೆಸರಿನಲ್ಲಿ, ಮಾಡುವ ಊಟದ ಹೆಸರಿನಲ್ಲಿ ಗುಂಪುಹಲ್ಲೆಗಳು, ಕಗ್ಗೊಲೆಗಳು ನಡೆಯುತ್ತಿವೆ. ಅಧಿಕಾರದಲ್ಲಿರುವವರು ಇಂಥ ಭೀಕರ ಹಿಂಸಾಚಾರ ಮತ್ತು ಕಗ್ಗೊಲೆಗಳಿಗೆ ಕಾರಣವಾದ ದ್ವೇಷವನ್ನು ಅಂತರಜಾಲ ತಂತ್ರಜ್ಞಾನದ ಎಲ್ಲ ಪಟ್ಟುಗಳನ್ನು ಬಳಸಿ ಜನರ ಮನಸ್ಸಿನಲ್ಲಿ ತುಂಬುತ್ತಿದ್ದಾರೆ. ಶಿಕ್ಷಣದ ಅತ್ಯುನ್ನತ ಸಂಸ್ಥೆಗಳಿಂದ ಮೊದಲುಗೊಂಡು ಕೆಳಮಟ್ಟದ ಶಾಲಾಕಾಲೇಜುಗಳವರೆಗೆ, ಎಲ್ಲೆಡೆಯೂ, ಮತಾಂಧತೆಯಿಂದ ಕೂಡಿದ ಪಾಠಗಳನ್ನು, ವಿಚಾರಗಳನ್ನು ವಿದ್ಯಾರ್ಥಿಗಳ ತಲೆಗಳಲ್ಲಿ ತುಂಬುವ ಪ್ರಯತ್ನಗಳು ನಡೆಯುತ್ತಿವೆ. ಭಾರತೀಯತೆಯ, ವಸುಧೈವ ಕುಟುಂಬಮ್ ಅನ್ನುವುದರ ಅರ್ಥವನ್ನೇ ತಿರುಚಲಾಗುತ್ತಿದೆ. ಆದರೆ, ಸಂಕರವೇ ಶಿವವಲ್ಲವೇ? ‘ಅಯ್ಯೋ, ನನ್ನ ದೇಶವೇ’ ಎಂದು ನನ್ನಂಥ ಕೋಟ್ಯಂತರ ಜನರು ಹಲುಬುವಂತಾಗಿದೆ.

ಭಾರತ ಮತ್ತು ವಿಶಾಲ ಜಗತ್ತುಗಳ ಭವಿಷ್ಯವನ್ನು ರೂಪಿಸಬೇಕಾಗಿರುವ ಕನ್ಹಯ್ಯಾಕುಮಾರ್ ಅಂಥ ಯುವಕರು ಹಲವರಮೇಲೆ, ಅವರು ವಿಶ್ವವಿದ್ಯಾಲಯಗಳಲ್ಲಿ ಓದುತ್ತಿದ್ದಾಗಲೇ, ದೇಶದ್ರೋಹದ ಆರೋಪವನ್ನು ಹೊರಿಸಲಾಗಿದ್ದು, ಅವರು ನ್ಯಾಯಾಲಯಗಳಲ್ಲಿ ಆ ಪ್ರಕರಣವನ್ನು ಇನ್ನೂ ಎದುರಿಸುತ್ತಲೇ ಇದ್ದಾರೆ. ದೇಶದ ಅತ್ಯಂತ ಶೋಷಿತರು ಮತ್ತು ದಲಿತ ಜನರ ಪರವಾಗಿ ಕೋರ್ಟು-ಕಚೇರಿಗಳಲ್ಲಿ ವಾದಿಸುತ್ತ, ಅವರ ಅಪಾರ ಕಷ್ಟಗಳನ್ನು ಕುರಿತು ಲೇಖನ ಮತ್ತು ಪುಸ್ತಕಗಳನ್ನು ಬರೆಯುತ್ತ, ಅವರ ಹೋರಾಟವು ಅಹಿಂಸಾಮಾರ್ಗದಲ್ಲಿ ನಡೆಯುವಂತೆ ಸಲಹೆ-ಸಹಕಾರ ನೀಡುತ್ತ, ಭಾರತದ ಸಂವಿಧಾನದ ಎಲ್ಲ ವಿಧಿವಿಧಾನಗಳನ್ನು ಪಾಲಿಸುತ್ತ, ಆ ನಮ್ಮ ಸಂವಿಧಾನದ ಜೀವಾಳವನ್ನು ಎತ್ತಿಹಿಡಿಯುತ್ತ, ನಿಸ್ಪೃಹೆಯಿಂದ, ತಮ್ಮತಮ್ಮದೇ ರೀತಿಯಲ್ಲಿ ಹೋರಾಡುತ್ತ ಬಂದಿರುವ ಹಲವರ ವಿರುದ್ಧ ಯುಎಪಿಎ ಕಾಯಿದೆಯಡಿ ವಿಚಾರಣೆ ನಡೆಯುತ್ತಿದ್ದು, ಅವರಲ್ಲಿ ಹೆಚ್ಚಿನವರು ಜಾಮೀನು ಕೂಡ ಸಿಕ್ಕದೆ ಸೆರೆಮನೆಯಲ್ಲಿದ್ದಾರೆ. ದೇಶದ ಅತ್ಯಂತ ದಮನಿತರ ದನಿಯಾಗಿರುವವರು ಈ ಧೀಮಂತರು, ಧೀಮಂತೆಯರು. ಇಂಥವರನ್ನು ನಿರ್ವೀರ್ಯಗೊಳಿಸಿ, ಇವರ ಬಾಯಿಮುಚ್ಚಿಸಿದರೆ ಆ ದಮನಿತರ ದನಿಯನ್ನು ಅಷ್ಟರಮಟ್ಟಿಗೆ ಅಡಗಿಸಬಹುದು ಎಂದು ಪ್ರಭುತ್ವವು ನಿರ್ಧರಿಸಿದಂತಿದೆ. ಇದೆಲ್ಲ ಹೊಸದಲ್ಲ; ಈಹಿಂದೆ ಅಧಿಕಾರದಲ್ಲಿದ್ದವರು ಕೂಡ ಹೀಗೆಯೇ ಪ್ರಭುತ್ವದ ಶಕ್ತಿಯ ದುರ್ವಿನಿಯೋಗ ಮಾಡಿದ್ದಾರೆ.

ನಿಜವಾದ ದೇಶಪ್ರೇಮಿಗಳು, ಲೋಕೋಪಕಾರಿಗಳು, ಧರ್ಮಮಾರ್ಗಿಗಳು ಆಗಿರುವ, ಮತ್ತು ಸಕಲ ಚರಾಚರಕ್ಕೆ ಲೇಸನ್ನೇ ಬಯಸುತ್ತ, ಲೇಸನ್ನೇ ಉಂಟುಮಾಡಲು ಬದುಕುತ್ತಿರುವ ಇಂಥವರಿಗೆ ನನ್ನ ದೇಶದಲ್ಲಿ ಹೀಗೆ ಅನ್ಯಾಯವಾಗುತ್ತಿರುವಾಗ, ರಂಗಭೂಮಿಯ ಕಲಾವಿದನಾಗಿ, ಕವಿ-ನಾಟಕಕಾರನಾಗಿ, ಈ ದೇಶ ಮತ್ತು ಲೋಕದ ಪ್ರಜೆಯಾಗಿ ನಾನು ಈ ಪ್ರಶಸ್ತಿಯನ್ನು ಸ್ವೀಕರಿಸಲಾರೆ. ಇದನ್ನು ಸ್ವೀಕರಿಸಲು ನನ್ನ ಆತ್ಮಸಾಕ್ಷಿ, ಅಂತರ್ಯಾಮಿ ಒಪ್ಪದು.

ಇದು ಪ್ರತಿಭಟನೆಯಲ್ಲ; ವ್ಯಥೆ; ಪ್ರಶಸ್ತಿಯನ್ನು ಸ್ವೀಕರಿಸಲು ಬಿಡದಿರುವ ಅಸಹಾಯಕತೆ. ಅಕಾಡೆಮಿಯ ಬಗ್ಗೆ ನನಗೆ ಗೌರವವಿದೆ; ಮತ್ತು, ಈಗ ಮತ್ತು ಈಹಿಂದೆ ಇಂಥ ಪ್ರಶಸ್ತಿ ಪಡೆದ ನನ್ನೆಲ್ಲ ಸಹೋದ್ಯೋಗಿಗಳ ಬಗ್ಗೆ ಗೌರವವಿದೆ. ಅಕಾಡೆಮಿಯ ಸದಸ್ಯರಿಗೆ, ಮತ್ತೊಮ್ಮೆ, ಕೃತಜ್ಞತೆಗಳು. ಅವರ ಕ್ಷಮೆ ಬೇಡುತ್ತಿದ್ದೇನೆ.

ಶಿವಕಾರುಣ್ಯವಿರಲಿ..

ರಘುನಂದನ
17 ಜುಲೈ 2019

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT