ಬೆಂಗಳೂರು:ಕರ್ನಾಟಕ ಸಾಹಿತ್ಯ ಅಕಾಡೆಮಿಯು 2019ನೇ ಸಾಲಿನ ಗೌರವ ಪ್ರಶಸ್ತಿ ಹಾಗೂ ಸಾಹಿತ್ಯ ಶ್ರೀ ಪ್ರಶಸ್ತಿ ಪುರಸ್ಕೃತರ ಪಟ್ಟಿಯನ್ನು ಶುಕ್ರವಾರ ಪ್ರಕಟಿಸಿದೆ.
ಸಂಸ್ಕೃತಿ ಚಿಂತನೆಯಲ್ಲಿ ತೊಡಗಿರುವತುಮಕೂರಿನ ಕೆ.ಜಿ. ನಾಗರಾಜಪ್ಪ, ಸಾಹಿತ್ಯ ಮತ್ತು ಪತ್ರಿಕೋದ್ಯಮ ಕ್ಷೇತ್ರದ ಬಾಬು ಕೃಷ್ಣಮೂರ್ತಿ, ಕನ್ನಡ, ತುಳು, ಇಂಗ್ಲಿಷ್ ಸಾಹಿತ್ಯದಲ್ಲಿ ಹೆಸರು ಮಾಡಿರುವ ಉಷಾ ಪಿ. ರೈ, ಇತಿಹಾಸಜ್ಞ ಪ್ರೊ. ಲಕ್ಷ್ಮಣ ತೆಲಗಾವಿ, ರಾಯಚೂರಿನ ಸಾಹಿತಿ ಡಾ. ವೀರಣ್ಣ ರಾಜೂರ ಅವರಿಗೆ ಜೀವಮಾನ ಸಾಧನೆ ಗುರುತಿಸಿ ಗೌರವ ಪ್ರಶಸ್ತಿ ನೀಡಲಾಗಿದೆ.
ಈ ಪ್ರಶಸ್ತಿಯು ₹50 ಸಾವಿರ ನಗದು, ಫಲಕ ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.
ಸೃಜನಶೀಲಶೀಲ ಸಾಹಿತ್ಯ ಕ್ಷೇತ್ರದಲ್ಲಿ ಸಾಧನೆ ಮಾಡಿದ ಐವರು, ಸೃಜನೇತರ ಸಾಹಿತ್ಯ ಕ್ಷೇತ್ರದಲ್ಲಿ ಮೂವರು ಹಾಗೂ ಸಾಹಿತ್ಯ ಪರಿಚಾರಿಕೆಗೆ ಒಬ್ಬರು ಮತ್ತು ಹೊರನಾಡಿನ ಒಬ್ಬ ಸಾಧಕರು ಸೇರಿದಂತೆ ಒಟ್ಟು ಹತ್ತು ಜನರಿಗೆ ಈ ಬಾರಿ ಸಾಹಿತ್ಯ ಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಈ ಪ್ರಶಸ್ತಿಯು ₹25 ಸಾವಿರ ನಗದು ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ.
2018ನೇ ಸಾಲಿನ ಪುಸ್ತಕ ಬಹುಮಾನ ಪಡೆದವರ ಪಟ್ಟಿಯನ್ನೂ ಬಿಡುಗಡೆ ಮಾಡಲಾಗಿದ್ದು, ಈ ಪುರಸ್ಕಾರವು ₹25 ಸಾವಿರ ನಗದು ಹಾಗೂ ಪ್ರಮಾಣಪತ್ರವನ್ನು ಒಳಗೊಂಡಿದೆ. 2018ನೇ ಸಾಲಿನ ದತ್ತಿನಿಧಿ ಬಹುಮಾನ ಪಡೆದವರ ಪಟ್ಟಿಯನ್ನೂ ಪ್ರಕಟಿಸಲಾಗಿದೆ.
ಸಾಹಿತ್ಯ ಶ್ರೀ ಪ್ರಶಸ್ತಿ:ಅಮರೇಶ ನುಗಡೋಣಿ, ಡಾ.ವಿ.ಎಸ್. ಮಾಳಿ, ಸುಬ್ಬು ಹೊಲೆಯಾರ್, ಡಾ. ಶಾರದಾ ಕುಪ್ಪಂ, ಪಿ. ಶಿವಣ್ಣ, ಎಂ.ಎಸ್. ವೇದಾ, ಪ್ರೊ.ಎಫ್.ಟಿ. ಹಳ್ಳಿಕೇರಿ, ಡಾ. ಮಾಧವ ಪೆರಾಜೆ, ವಸುಧೇಂದ್ರ, ಡಾ.ಜಿ. ಪ್ರಶಾಂತ ನಾಯಕ.
ಕನ್ನಡ ಪರಿಚಾರಿಕೆಗಾಗಿ (ಪಿ. ಶಿವಣ್ಣ) ಇದೇ ಮೊದಲ ಬಾರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ಘೋಷಿಸಲಾಗಿದೆ. ಪ್ರಶಸ್ತಿ ಪ್ರದಾನ ಕಾರ್ಯಕ್ರಮ ತಿಂಗಳಾಂತ್ಯಕ್ಕೆ ನಡೆಯಲಿದೆ –ಡಾ. ಬಿ.ವಿ. ವಸಂತಕುಮಾರ್ ,ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ