ಬೆಂಗಳೂರು: ಲಾಕ್ಡೌನ್ ಹಾಗೂ ನಿಷೇಧಾಜ್ಞೆಯಿಂದಾಗಿ ನಗರದಲ್ಲಿ ಮದ್ಯದಂಗಡಿಗಳನ್ನು ಬಂದ್ ಮಾಡಲಾಗಿದೆ. ಇದರ ನಡುವೆಯೇ ನಗರಕ್ಕೆ ಅಕ್ರಮವಾಗಿ ಸೇಂದಿ ಸರಬರಾಜು ಆಗುತ್ತಿದ್ದು, ಈ ಸಂಬಂಧ ಪ್ರವೀಣ್ ಎಂಬಾತನನ್ನು ಅಬಕಾರಿ ಪೊಲೀಸರು ಬಂಧಿಸಿದ್ದಾರೆ.
‘ಆಂಧ್ರಪ್ರದೇಶದಲ್ಲಿ ತಯಾರಿಸಿದ್ದ ಸೇಂದಿಯನ್ನು ಆರೋಪಿಗಳು ನಗರಕ್ಕೆ ತಂದು ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಸಿಗುತ್ತಿದ್ದಂತೆ ಕಾರ್ಯಾಚರಣೆ ನಡೆಸಿ ಆರೋಪಿ ಪ್ರವೀಣ್ನನ್ನು ಬಂಧಿಸಲಾಗಿದೆ. ಇನ್ನಿಬ್ಬರು ಪರಾರಿಯಾಗಿದ್ದಾರೆ’ ಎಂದು ಅಬಕಾರಿ ಪೊಲೀಸ್ ಮೂಲಗಳು ತಿಳಿಸಿವೆ.
‘ಹೆಣ್ಣೂರು- ಬಾಗಲೂರು ರಸ್ತೆ ಮಾರ್ಗವಾಗಿ ಸೇಂದಿಯನ್ನು ತರಲಾಗುತ್ತಿತ್ತು. ಅದೇ ರಸ್ತೆಯಲ್ಲಿ ಆರೋಪಿಗಳನ್ನು ತಡೆದು ತಪಾಸಣೆ ನಡೆಸಲಾಯಿತು. ಅವರ ಬಳಿ ಇದ್ದ 40 ಲೀಟರ್ ಸೇಂದಿ ಜಪ್ತಿ ಮಾಡಲಾಗಿದೆ.’
‘ನಗರದಲ್ಲಿ ಮದ್ಯ ಮಾರಾಟ ಸಂಪೂರ್ಣವಾಗಿ ಬಂದ್ ಆಗಿದೆ. ಇದನ್ನೇ ಬಂಡವಾಳ ಮಾಡಿಕೊಂಡ ಆರೋಪಿಗಳು, ಹಣದಾಸೆಗಾಗಿ ಸೇಂದಿಯನ್ನು ತಂದು ಮಾರುತ್ತಿದ್ದರು. ನಗರದಲ್ಲಿ ಏಜೆಂಟರ ಮೂಲಕ ಕಾರ್ಮಿಕರಿಗೆ ಸೇಂದಿ ಮಾರಾಟ ಮಾಡಲಾಗುತ್ತಿತ್ತು. ಏಜೆಂಟರನ್ನು ಪತ್ತೆ ಮಾಡಲಾಗುತ್ತಿದೆ’ ಎಂದು ಮೂಲಗಳು ಹೇಳಿವೆ.