ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಂಡಾಯಕ್ಕೆ ಡಿಕೆಶಿಯೇ ಕಾರಣ

ರಾಮನಗರ ಜಿಲ್ಲೆಯಲ್ಲಿ ನಾವು ಮೂಗು ತೂರಿಸಿದರೆ ಸುಮ್ಮನಿರುತ್ತಾರೆಯೇ?
Last Updated 18 ಸೆಪ್ಟೆಂಬರ್ 2018, 19:34 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಳಗಾವಿ ಜಿಲ್ಲೆಯ ಆಂತರಿಕ ರಾಜಕಾರಣದಲ್ಲಿ ಜಲಸಂಪನ್ಮೂಲ ಸಚಿವ ಡಿ.ಕೆ.ಶಿವಕುಮಾರ್ ಮೂಗು ತೂರಿಸಿದ್ದೇ ಎಲ್ಲ ಸಮಸ್ಯೆಗಳಿಗೂ ಕಾರಣ. ನಾವು ರಾಮನಗರ ಜಿಲ್ಲೆಯ ರಾಜಕಾರಣದಲ್ಲಿ ಹಸ್ತಕ್ಷೇಪ ಮಾಡಿದರೆ ಅವರು ಸುಮ್ಮನಿರುತ್ತಾರಾ’ ಎಂದು ಶಾಸಕ ಸತೀಶ್‌ ಜಾರಕಿಹೊಳಿ ಕಟುವಾಗಿ ಪ್ರಶ್ನಿಸಿದರು.

‘ಪ್ರಜಾವಾಣಿ’ ಜತೆಗೆ ಮಾತನಾಡಿದ ಅವರು, ‘ಬೆಳಗಾವಿ ಜಿಲ್ಲೆಗೆ ಶಿವಕುಮಾರ್‌ ಕಾಲಿಡಲೇಬಾರದು ಎಂದು ನಾವೆಂದೂ ಹೇಳಿಲ್ಲ. ತಮ್ಮ ಇಲಾಖೆಗೆ ಸಂಬಂಧಿಸಿದ ಸಭೆಗಳನ್ನು ನಡೆಸಿಕೊಂಡು ಹೋಗಲಿ. ಅದನ್ನು ನಾವು ಸ್ವಾಗತಿಸುತ್ತೇವೆ. ಅದನ್ನು ಬಿಟ್ಟು ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡಿದರೆ ಸಹಿಸಲು ಸಾಧ್ಯವೇ? ಪ್ರತಿಷ್ಠೆ ಬಿಟ್ಟುಕೊಡಲು ಸಾಧ್ಯವೇ’ ಎಂದು ಮರು ಪ್ರಶ್ನಿಸಿದರು. ಇಬ್ಬರು ಪ್ರಭಾವಿ ಮುಖಂಡರು ಪರಸ್ಪರ ಕಾದಾಡಿಕೊಂಡರೆ ಇಂತಹ ಅಲ್ಲೋಲಕಲ್ಲೋಲ ಸಹಜ ಎಂದೂ ಸಮರ್ಥಿಸಿಕೊಂಡರು.

‘ನಮ್ಮ ಜಿಲ್ಲೆಯಲ್ಲಿ ನಾವು ಸಹಕಾರದ ರಾಜಕಾರಣ ನಡೆಸಿಕೊಂಡು ಬಂದಿದ್ದೇವೆ. ಇಲ್ಲಿ ಕಾಂಗ್ರೆಸ್‌, ಜೆಡಿಎಸ್‌ ಹಾಗೂ ಬಿಜೆಪಿ ಎಂಬ ಪ್ರಶ್ನೆ ಉದ್ಭವವಾಗುವುದಿಲ್ಲ. ಪಿಎಲ್‌ಡಿ ಬ್ಯಾಂಕ್‌ ಚುನಾವಣೆಯಲ್ಲಿ ನಮ್ಮ ನಡುವೆಯೇ ಸ್ಪರ್ಧೆ ನಡೆದಿತ್ತು. ಶಿವಕುಮಾರ್‌ ಮಧ್ಯಪ್ರವೇಶ ಮಾಡದೇ ಇದ್ದರೆ ಸುಲಭದಲ್ಲಿ ಎಲ್ಲ ಮುಗಿದುಹೋಗುತ್ತಿತ್ತು. ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಅವರನ್ನು ನಮ್ಮ ವಿರುದ್ಧ ಎತ್ತಿಕಟ್ಟಿದರು. ನಾಮಪತ್ರ ಸಲ್ಲಿಕೆಗೆ ಒಂದು ಗಂಟೆ ಇರುವಾಗ ಎದುರಾಳಿಗಳಿಂದ ನಾಮಪತ್ರ ಹಾಕಿಸಿದರು’ ಎಂದು ಅಸಮಾಧಾನ ವ್ಯಕ್ತಪಡಿಸಿದರು.

‘ಲಕ್ಷ್ಮಿ ಹೆಬ್ಬಾಳಕರ ಅವರನ್ನು ಬೆಳೆಸಿದ್ದು ನಾನಲ್ಲ. ಅವರು ಲೋಕಸಭಾ ಚುನಾವಣೆಗೆ ನಿಂತಾಗ ಬೆಂಬಲ ನೀಡಿದ್ದೆ. ಲಕ್ಷ್ಮಿ, ರಮೇಶ ಜಾರಕಿಹೊಳಿ ಹಾಗೂ ಡಿ.ಕೆ.ಶಿವಕುಮಾರ್‌ ಅವರ ಗರಡಿ ಮನೆ ಬೇರೆ. ಅವರು ಮೂರೂ ಜನ 10 ವರ್ಷಗಳಿಂದ ಜತೆಗೂಡಿ ರಾಜಕಾರಣ ನಡೆಸಿಕೊಂಡು ಬಂದಿದ್ದರು. ಅವರು ಜಲಸಂಪನ್ಮೂಲ ಸಚಿವರಾದ ಬಳಿಕ ಸಮಸ್ಯೆ ಆರಂಭವಾಯಿತು. ನಮ್ಮ ಜಿಲ್ಲೆಯ ವಿಷಯದಲ್ಲಿ ಮಧ್ಯಪ್ರವೇಶಿಸಲು ಆರಂಭಿಸಿದರು. ವರ್ಗಾವಣೆಗಳನ್ನೂ ಮಾಡಿಸಿದರು. ಇದು ರಮೇಶನ ಅಸಮಾಧಾನಕ್ಕೆ ಕಾರಣವಾಯಿತು. ಪಿಎಲ್‌ಡಿ ಬ್ಯಾಂಕ್‌ ವಿಷಯದಲ್ಲಿ ಅಸಮಾಧಾನ ಸ್ಫೋಟಗೊಂಡಿತು’ ಎಂದು ಅವರು ವಿಶ್ಲೇಷಿಸಿದರು.

ಬೆಳಗಾವಿ ವಿಷಯಕ್ಕೆ ಶಿವಕುಮಾರ್‌ ಇನ್ನುಮುಂದೆ ಬರುವುದಿಲ್ಲ ಎಂದು ವರಿಷ್ಠರು ಭರವಸೆ ನೀಡಿದ್ದಾರೆ. ಅಷ್ಟಾದರೆ ಸಾಕು. ಸೂಚನೆ ಮೀರಿ ಮತ್ತೆ ಬಂದರೆ ವರಿಷ್ಠರ ಗಮನಕ್ಕೆ ತರುತ್ತೇವೆ. ಪುನಃ ದಾರಿ ಇದೆಯಲ್ಲ ಎಂದು ಮಾರ್ಮಿಕವಾಗಿ ನುಡಿದರು.

‘ವರ್ಗಾವಣೆ ಸಮಸ್ಯೆಯನ್ನು ಬಗೆಹರಿಸುವುದಾಗಿ ಮುಖ್ಯಮಂತ್ರಿ ಭರವಸೆ ನೀಡಿದ್ದಾರೆ. ಕೆಲವು ತಿಂಗಳಿಂದ ಅಭಿವೃದ್ಧಿ ಕೆಲಸಗಳು ಸ್ಥಗಿತ ಆಗಿದ್ದವು. ಹಿಂದಿನ ಸರ್ಕಾರದ ಅವಧಿಯ ಕೆಲಸಗಳು ಬಾಕಿ ಇದ್ದವು. ಆ ಕೆಲಸಗಳನ್ನು ಮಾಡಿಸಿಕೊಡುವುದಾಗಿ ಕುಮಾರಸ್ವಾಮಿ ಭರವಸೆ ನೀಡಿದ್ದಾರೆ. ಅದಕ್ಕೆಲ್ಲ ಕಾಲಾವಕಾಶ ಬೇಕು. ನಾವು ಈಗ ಸಮಾಧಾನಗೊಂಡಿದ್ದೇವೆ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT