ಬೆಳಗಾವಿ: ‘ಶಾಸಕ ಸತೀಶ ಜಾರಕಿಹೊಳಿ ಅವರ ತಲೆ ಸರಿಯಿಲ್ಲ. ಅವರನ್ನು ಧಾರವಾಡಕ್ಕೆ (ಹುಚ್ಚಾಸ್ಪತ್ರೆ) ಸೇರಿಸಬೇಕಾಗಿದೆ’ ಎಂದು ಸಹೋದರ ರಮೇಶ ಜಾರಕಿಹೊಳಿ ವಾಗ್ದಾಳಿ ನಡೆದರು.
ಇಲ್ಲಿನ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ದೇವರ ದರ್ಶನ ಮಾಡಲು ದೆಹಲಿಗೆ ಹೋಗಿದ್ದೆ ಹೊರತು, ಮೋಜು ಮಸ್ತಿ ಮಾಡಲು ಅಲ್ಲ. ಇಂತಹ ಹೇಳಿಕೆ ನೀಡಿರುವ ಸತೀಶ ಅವರ ತಲೆ ಸರಿಯಿಲ್ಲ’ ಎಂದು ಪ್ರತಿಕ್ರಿಯಿಸಿದರು.
‘ಇ.ಡಿ ವಿಚಾರಣೆ ಎದುರಿಸುತ್ತಿರುವ ಶಾಸಕ ಡಿ.ಕೆ. ಶಿವಕುಮಾರ್ ನನ್ನ ಒಳ್ಳೆಯ ಸ್ನೇಹಿತ. ರಾಜಕೀಯವಾಗಿ ನಮ್ಮ ನಡುವೆ ಭಿನ್ನಾಭಿಪ್ರಾಯಗಳಿದ್ದರೂ ನಾವು ಸ್ನೇಹಿತರಾಗಿದ್ದೇವೆ. ಕಳೆದ ಬಾರಿ ದೆಹಲಿಗೆ ಹೋದಾಗ ಅವರನ್ನು ಭೇಟಿಯಾಗಲು ಸಾಧ್ಯವಾಗಲಿಲ್ಲ. ಮುಂದಿನ ಸಲ ಮತ್ತೆ ಹೋದರೆ ಭೇಟಿಯಾಗುವೆ’ ಎಂದು ಹೇಳಿದರು.
‘ಗೋಕಾಕದ ಪ್ರವಾಹ ಪೀಡಿತ ಪ್ರದೇಶಗಳಿಗೆ ನಾನು ಭೇಟಿ ನೀಡಿದ್ದೆ. ಅಲ್ಲಿನ ಜನರ ಸಂಕಷ್ಟವನ್ನು ಆಲಿಸಿದ್ದೇನೆ. ಪ್ರವಾಹದ ಸಂದರ್ಭದಲ್ಲಿ ನಾನು ಮೋಜು ಮಸ್ತಿ ಮಾಡಲು ದೆಹಲಿ ಹೋಗಿದ್ದೆ ಎಂದು ಕೆಲವು ಮಾಧ್ಯಮಗಳು ತಪ್ಪಾಗಿ ಬಿಂಬಿಸಿವೆ. ಇದರ ಬಗ್ಗೆ ಜನರಿಗೆ ಸ್ಪಷ್ಟೀಕರಣ ನೀಡುವ ಉದ್ದೇಶದಿಂದ ಗೋಕಾಕದಲ್ಲಿ ಶನಿವಾರ ಸಂಕಲ್ಪ ಸಮಾವೇಶ ಹಮ್ಮಿಕೊಂಡಿದ್ದೇನೆ’ ಎಂದರು.