ಬೆಳಗಾವಿ: ಜಿಲ್ಲೆಯ ಖಾನಾಪುರ ತಾಲ್ಲೂಕಿನ ಕಣಕುಂಬಿ ಬಳಿಯ ಸಾತೇವಾಡಿ ರೆಸಾರ್ಟ್ಗೆ ಶಾಸಕ ಸತೀಶ ಜಾರಕಿಹೊಳಿ ಭಾನುವಾರ ಸಂಜೆ ಭೇಟಿ ನೀಡಿದ್ದು, ಚರ್ಚೆಗೆ ಗ್ರಾಸವಾಗಿದೆ.
‘ಮುಂದೆ ಯಾವತ್ತಾದರೂ ಶಾಸಕರನ್ನು ಕರೆದುಕೊಂಡು ಹೋಗಲು ಬೇಕಾಗುತ್ತದೆಂದು ರೆಸಾರ್ಟ್ ನೋಡಲು ಹೋಗಿದ್ದೇ. ಅವರನ್ನು ವಿಹಾರಕ್ಕೆಂದು ಕರೆದೊಯ್ಯುತ್ತೇನೆ ಹೊರತು, ಪಕ್ಷಾಂತರ ಮಾಡಲು ಅಲ್ಲ’ ಎಂದು ಸೋಮವಾರ ಸುದ್ದಿಗಾರರಿಗೆ ತಿಳಿಸಿದರು.
‘ಪಣಜಿಯಲ್ಲಿ ನಡೆದ ಸ್ನೇಹಿತರ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಬೆಳಗಾವಿಗೆ ಮರಳುತ್ತಿದ್ದೆ. ಆಗ ಮಾರ್ಗಮಧ್ಯೆದಲ್ಲಿದ್ದ ಈ ರೆಸಾರ್ಟ್ ನೋಡಲು ಹೋಗಿದ್ದೆ ಅಷ್ಟೇ’ ಎಂದು ಹೇಳಿದರು.
ಯಾರೂ ಪಕ್ಷ ಬಿಡಲ್ಲ:‘ರೆಸಾರ್ಟ್ಗೆ ಸತೀಶ ಅವರು ಸಹಜವಾಗಿ ಹೋಗಿದ್ದಾರೆ. ಅದಕ್ಕೆ ಬೇರೆ ಅರ್ಥ ಕಲ್ಪಿಸಿಕೊಳ್ಳಬೇಕಾಗಿಲ್ಲ. ನಮ್ಮ ಪಕ್ಷವನ್ನು ಯಾರೂ ಬಿಟ್ಟು ಹೋಗಲ್ಲ. ಪಕ್ಷದಲ್ಲಿ ಸಣ್ಣಪುಟ್ಟ ಭಿನ್ನಾಭಿಪ್ರಾಯಗಳಿದ್ದರೆ ವರಿಷ್ಠರು ಬಗೆಹರಿಸುತ್ತಾರೆ’ ಎಂದು ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದರು.
ಶರಬತ್ತು ಕುಡಿಸಿದರೆ ನಾಯಕರಾಗಲ್ಲ ಎಂದು ಸಚಿವ ಡಿ.ಕೆ. ಶಿವಕುಮಾರ್ಗೆ ಸತೀಶ ನೀಡಿದ್ದ ಟಾಂಗ್ಗೆ ಪ್ರತಿಕ್ರಿಯೆ ನೀಡಿದ ಅವರು, ‘ಅವರು ಬರುವವರೆಗೆ ಏಕೆ ಕಾಯಬೇಕಾಗಿತ್ತು. ಇವರೇ ಹೋಗಿ ಜ್ಯೂಸ್ ಕುಡಿಸಬಹುದಿತ್ತಲ್ಲ’ ಎಂದು ಹೇಳಿದರು.