ಧಾರವಾಡ:ಉತ್ತರ ಕರ್ನಾಟಕದ ಒಂದು ಹಳ್ಳಿಯನ್ನು ದತ್ತು ಪಡೆದು, ಅಭಿವೃದ್ಧಿಪಡಿಸುವುದಾಗಿ ನಟ ನೀನಾಸಂ ಸತೀಶ ಹೇಳಿದರು.
‘ಅಯೋಗ್ಯ’ ಚಿತ್ರದ ಪ್ರಚಾರಕ್ಕಾಗಿ ಶನಿವಾರ ನಗರಕ್ಕೆ ಬಂದಿದ್ದ ಅವರು, ‘ಉತ್ತರ ಕರ್ನಾಟಕದ ಬಹುತೇಕ ಗ್ರಾಮಗಳು ಈವರೆಗೂ ಅಭಿವೃದ್ಧಿ ಕಂಡಿಲ್ಲ. ಆದ್ದರಿಂದ, ನನ್ನಿಂದ ಸಾಧ್ಯವಾದಷ್ಟು ಸಹಾಯ ಮಾಡಬೇಕು ಎಂಬ ಸಂಕಲ್ಪ ಮಾಡಿದ್ದೇನೆ’ ಎಂದು ಸುದ್ದಿ ಗೋಷ್ಠಿಯಲ್ಲಿ ತಿಳಿಸಿದರು.
‘ಮುಂಬರುವ ದಿನಗಳಲ್ಲಿ ಹಳ್ಳಿಗಳ ಪರಿಶೀಲನೆ ನಡೆಸಿ, ಅದಕ್ಕೆ ಬೇಕಾದ ಮೂಲಸೌಕರ್ಯ ಕಲ್ಪಿಸಲು ಸಿದ್ಧನಿದ್ದೇನೆ. ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಮಾಡುವ ಉದ್ದೇಶವಿದೆ. ಅಗತ್ಯಬಿದ್ದರೆ ಹಣ ಸಂಗ್ರಹಿಸಲು ಜೋಳಿಗೆ ಹಿಡಿಯಲೂ ನಾನು ಸಿದ್ಧನಿದ್ದೇನೆ’ ಎಂದು ಸತೀಶ ಹೇಳಿದರು.