ನವದೆಹಲಿ(ಪಿಟಿಐ): ಉಜ್ವಲಾ ಯೋಜನೆಯ ಅಡಿಯಲ್ಲಿ 8 ಕೋಟಿ ಉಚಿತ ಅಡುಗೆ ಅನಿಲ ಸಂಪರ್ಕ ನೀಡಲಾಗುವುದು ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ.
5 ಕೋಟಿ ಬಡ ಮಹಿಳೆಯರನ್ನು ಹೊಗೆ ಮತ್ತು ಕಟ್ಟಿಗೆ ಒಲೆಯಿಂದ ಮುಕ್ತಗೊಳಿಸುವ ಉದ್ದೇಶದಿಂದ ಉಜ್ವಲಾ ಯೋಜನೆಯನ್ನು ರೂಪಿಸಿದ್ದು, ಇದರ ಜನಪ್ರಿಯತೆಯ ಕಾರಣ ಫಲಾನುಭವಿಗಳ ಸಂಖ್ಯೆಯನ್ನು 8 ಕೋಟಿಗೆ ಏರಿಸಲಾಗಿದೆ ಎಂದರು.
ಸಾವಯವ ಕೃಷಿಗೆ ಉತ್ತೇಜನ ನೀಡಲು ಮಹಿಳಾ ಸ್ವಸಹಾಯ ಸಂಘಗಳಿಗೆ ರಾಷ್ಟ್ರೀಯ ಗ್ರಾಮೀಣ ಜೀವನೋಪಯೋಗ ಕಾರ್ಯಕ್ರಮದ ಅಡಿಯಲ್ಲಿ ನೀಡುವ ಸಾಲ ಸೌಲಭ್ಯ ಮಾರ್ಚ್ 2019ರ ಹೊತ್ತಿಗೆ ₹75,000 ಕೋಟಿಯಷ್ಟು ಹೆಚ್ಚಾಗಲಿದೆ ಎಂದು ಹೇಳಿದರು.
ಹೆಣ್ಣುಮಕ್ಕಳಿಗಾಗಿ ಆರಂಭಿಸಿರುವ ‘ಬೇಟಿ ಬಚಾವೊ ಬೇಟಿ ಪಡಾವೊ’ ಯೋಜನೆಗೆ ಸರ್ಕಾರ ಬದ್ಧವಾಗಿದೆ. 2015ರಲ್ಲಿ ಜಾರಿಗೆ ತಂದಿರುವ ‘ಸುಕನ್ಯಾ ಸಮೃದ್ಧಿ ಖಾತೆ’ ಯೋಜನೆ ಭಾರಿ ಯಶಸ್ಸು ಕಂಡಿದೆ ಎಂದು ವಿವರಿಸಿದ್ದಾರೆ.
ನವೆಂಬರ್ 2017ರ ವರೆಗೆ ಈ ಯೋಜನೆಯ ಅಡಿಯಲ್ಲಿ ದೇಶದಾದ್ಯಂತ 1.26ಕೋಟಿಗೂ ಹೆಚ್ಚು ಖಾತೆಗಳನ್ನು ಹೆಣ್ಣು ಮಕ್ಕಳ ಹೆಸರಿನಲ್ಲಿ ತೆರೆಯಲಾಗಿದೆ ಎಂದು ಜೇಟ್ಲಿ ಹೇಳಿದ್ದಾರೆ.