ಹೊಸದುರ್ಗ: ಕುಂಚಿಟಿಗ ಮಹಾಸಂಸ್ಥಾನದ ಶಾಂತವೀರ ಸ್ವಾಮೀಜಿ ಮಠದ ಆಸ್ತಿಯನ್ನು ಪರಭಾರೆ ಮಾಡುತ್ತಿದ್ದಾರೆ ಎಂದು ಆರೋಪಿಸಿ, ಶಿವಮೊಗ್ಗದ ಸೋಮಿನಕೊಪ್ಪ ಗ್ರಾಮದ ಪಿ.ಆರ್. ಕಾಂತರಾಜ ಎಂಬುವವರು ಪಟ್ಟಣದ ಜೆಎಂಎಫ್ ನ್ಯಾಯಾಲಯ ಹಾಗೂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ ಏನಿದೆ? ಮಠದ ಜೀರ್ಣೋದ್ಧಾರಕ್ಕಾಗಿ ಸಮುದಾಯದ ಭಕ್ತರಿಂದ ಸಂಗ್ರಹಿಸಿದದೇಣಿಗೆ ಹಣದಲ್ಲಿ ರಾಜ್ಯದ ವಿವಿಧೆಡೆ ಮಠದ ಹೆಸರಿನಲ್ಲಿ ಆಸ್ತಿ ಖರೀದಿಸದೇ ತಮ್ಮ ಸ್ವಂತ ಹೆಸರಿನಲ್ಲಿ ಖರೀದಿಸಿದ್ದಾರೆ. ಮಠ ಹಾಗೂ ಸಮುದಾಯಕ್ಕೆ ಮೋಸ ಮಾಡುವ ಉದ್ದೇಶದಿಂದ ಎರಡು ಪಾನ್ಕಾರ್ಡ್ಗಳನ್ನು ಪಡೆದಿದ್ದಾರೆ.
ಮಠದಲ್ಲಿ ಸಮುದಾಯ ಭವನ, ವಿದ್ಯಾರ್ಥಿ ನಿಲಯ ನಿರ್ಮಾಣಕ್ಕೆ ಸರ್ಕಾರದಿಂದ ₹ 6.50 ಕೋಟಿ ಅನುದಾನ ಪಡೆದುಕೊಂಡಿದ್ದರೂ, ಯಾವುದೇ ಕಟ್ಟಡ ನಿರ್ಮಿಸದೇ ಸ್ವಂತಕ್ಕೆ ಹಣ ಬಳಕೆ ಮಾಡಿಕೊಂಡಿದ್ದಾರೆ. ಈ ಮೂಲಕ ಮಠಕ್ಕೆ, ಮಠದ ಭಕ್ತರಿಗೆ ಹಾಗೂ ಸರ್ಕಾರಕ್ಕೆ ವಂಚನೆ ಮಾಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ದಾಖಲೆ ಬಿಡುಗಡೆ ಮಾಡಲಿ: ಸ್ವಾಮೀಜಿ ‘ಮಠದ ಆಸ್ತಿ, ಜಮೀನು ಪರಭಾರೆ ಅಥವಾ ಮಾರಾಟ ಮಾಡಿದ್ದರೆ ಆರೋಪ ಮಾಡಿದವರು ದಾಖಲೆ ಬಿಡುಗಡೆಗೊಳಿಸಲಿ’ ಎಂದು ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶಾಂತವೀರ ಸ್ವಾಮೀಜಿ ಸವಾಲು ಹಾಕಿದರು.
ಚಿತ್ರದುರ್ಗದಲ್ಲಿ ಮಾಧ್ಯಮದವರೊಂದಿಗೆ ಶನಿವಾರ ಮಾತನಾಡಿದ ಅವರು, ‘ಕೋಟ್ಯಂತರ ಮೌಲ್ಯದ ಮಠದ ಆಸ್ತಿಯನ್ನು ಪರಭಾರೆ ಮಾಡಿದ್ದಾರೆ ಎಂಬುದಾಗಿ ಖಾಸಗಿ ವ್ಯಕ್ತಿಗಳು ನನ್ನ ವಿರುದ್ಧ ಮಾಡಿರುವ ಆರೋಪ ಸತ್ಯಕ್ಕೆ ದೂರವಾದುದು’ ಎಂದು ತಿಳಿಸಿದರು.