ಬೆಂಗಳೂರು: ಶಿರಾಡಿ ಘಾಟಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಸುರಂಗ ಮಾರ್ಗ ನಿರ್ಮಿಸುವ ಚಿಂತನೆಗೆ ಮರು ಚಾಲನೆ ಸಿಕ್ಕಿದೆ.
ಲೋಕೋಪಯೋಗಿ ಇಲಾಖೆ ಸಚಿವ ಎಚ್.ಡಿ.ರೇವಣ್ಣ ಶುಕ್ರವಾರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿ, ಶಿರಾಡಿಯಲ್ಲಿ ಸುರಂಗ ಮಾರ್ಗ ನಿರ್ಮಿಸುವ ಸಂಬಂಧ ಆದಷ್ಟು ಬೇಗ ಡಿಪಿಆರ್ ಸರ್ವೇ ನಡೆಸಲಾಗುವುದು ಎಂದರು.
23 ಕಿ.ಮೀ ಉದ್ದದ ಸುರಂಗ ಮಾರ್ಗ ನಿರ್ಮಿಸುವ ಚಿಂತನೆ ಇದೆ. ಸರ್ವೇ ವರದಿ ಪಡೆದು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ರೇವಣ್ಣ ತಿಳಿಸಿದರು.
ಕೆಶಿಪ್ ಯೋಜನೆ: ಕೆಶಿಪ್ 4ನೇ ಹಂತದಲ್ಲಿ 4,500 ಕಿ.ಮೀ ಉದ್ದದ ರಸ್ತೆ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು. ಇದಕ್ಕೆ ₹ 6,000 ಕೋಟಿ ವೆಚ್ಚವಾಗಲಿದೆ, ಬೆಂಗಳೂರು, ಮೈಸೂರು 10 ಪಥಗಳ ಮಾರ್ಗ ಡಿಸೆಂಬರ್ನಲ್ಲಿ ಕಾಮಗಾರಿ ಆರಂಭಗೊಂಡು 15 ತಿಂಗಳಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಇದೇ ಸಂದರ್ಭದಲ್ಲಿ ಕರ್ನಾಟಕ ರಸ್ತೆ ಆಸ್ತಿ ನಿರ್ವಹಣೆ ವ್ಯವಸ್ಥೆಯ ತಂತ್ರಾಂಶ ಕೈಪಿಡಿಯನ್ನು ಕಂದಾಯ ಸಚಿವ ಆರ್.ವಿ.ದೇಶಪಾಂಡೆ ಬಿಡುಗಡೆಗೊಳಿಸಿದರು. ರಸ್ತೆಗಳ ಗುಣಮಟ್ಟವನ್ನು ಪರೀಕ್ಷಿಸುವ ಫಾಲಿಂಗ್ ವೈಟ್ ಡಿಪ್ಲಕ್ಟೋ ಮೀಟರ್ ಮತ್ತು ಗ್ರೌಂಡ್ ಪೆನ್ಸ್ಟ್ರಾ ಎಷನ್ ಪ್ರಾಡರ್ ಉಪಕರಣವನ್ನು ರೇವಣ್ಣ ಅನಾವರಣಗೊಳಿಸಿದರು.