ತುಮಕೂರು: ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ಗುರುವಾರ ಹೆಚ್ಚಿನ ಸುಧಾರಣೆ ಕಂಡಿಲ್ಲ. ಆತಂಕಗೊಂಡಿರುವ ಗಣ್ಯರು, ಭಕ್ತರು ದಿನಪೂರ್ತಿ ಬಂದು ಸ್ವಾಮೀಜಿ ದರ್ಶನ ಪಡೆದರು.
ಬೆಳಿಗ್ಗೆ ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಿದ ಬಳಿಕ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ಅವರು ಸಂಜೆವರೆಗೆ ಮಠದಲ್ಲಿಯೇ ಉಳಿದರು. ಹಿರಿಯ ಶ್ರೀಗಳ ಆರೋಗ್ಯದಲ್ಲಿ ನಿರೀಕ್ಷಿತ ಸುಧಾರಣೆ ಕಾಣದಿರುವುದಕ್ಕೆ ನೊಂದಿರುವ ಕಿರಿಯಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ ಅವರನ್ನು ಯಡಿಯೂರಪ್ಪ ಸಮಾಧಾನ ಮಾಡಿದರು.
ಸ್ವಾಮೀಜಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣವಾಗುತ್ತಿರುವುದರಿಂದ ದರ್ಶನಕ್ಕೆ ಬರುವ ಭಕ್ತರ ಸಂಖ್ಯೆ ಹೆಚ್ಚಾಗುವ ಸಂಭವ ಇದ್ದು, ಹೆಚ್ಚಿನ ಭಕ್ತರು ಬಂದರೆ ಊಟ, ನೀರು, ನೆರಳು ಮತ್ತು ದರ್ಶನಕ್ಕೆ ಏನೇನು ವ್ಯವಸ್ಥೆ ಮಾಡಬೇಕೊ ಅದೆಲ್ಲವನ್ನೂಮಠದ ಆಡಳಿತ ಮಂಡಳಿ ಜತೆಗೂಡಿ ಜಿಲ್ಲಾಧಿಕಾರಿ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮಾಡುತ್ತಿದ್ದಾರೆ.
ವೈದ್ಯರ ಹೇಳಿಕೆ: ಸ್ವಾಮೀಜಿ ಅವರ ಆರೋಗ್ಯ ಸ್ಥಿರವಾಗಿದೆ. ಅಲ್ಬುಮಿನ್ ಪ್ರೊಟೀನ್ ಅಂಶ 2.7 ಇದ್ದು, ಸುಧಾರಣೆ ಕಂಡಿಲ್ಲ. ಇದರಿಂದ ಶ್ವಾಸಕೋಶದಲ್ಲಿ ನೀರು ತುಂಬಿಕೊಳ್ಳುತ್ತಿದೆ ಎಂದು ಸಂಜೆ ಸ್ವಾಮೀಜಿ ಆರೋಗ್ಯ ತಪಾಸಣೆ ಮಾಡಿದ ಬಿಜಿಎಸ್ ಆಸ್ಪತ್ರೆಯ ವೈದ್ಯ ಡಾ.ರವೀಂದ್ರ ಸುದ್ದಿಗಾರರಿಗೆ ತಿಳಿಸಿದರು.
14 ಹೆಲಿಪ್ಯಾಡ್
ಸ್ವಾಮೀಜಿ ಅವರ ಆರೋಗ್ಯ ವಿಚಾರಿಸಲು ಬರುವ ಗಣ್ಯರಿಗಾಗಿ ಹಿರೇಹಳ್ಳಿ ಕೈಗಾರಿಕಾ ಪ್ರದೇಶ, ಪಂಡಿತನಹಳ್ಳಿ ಸಮೀಪ 7 ಹಾಗೂ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣ, ಸಿದ್ಧಗಂಗಾ ತಾಂತ್ರಿಕ ಕಾಲೇಜು ಕ್ರೀಡಾಂಗಣದಲ್ಲಿ ತಲಾ ಎರಡು ಸೇರಿದಂತೆ 14 ಹೆಲಿಪ್ಯಾಡ್ ನಿರ್ಮಾಣಕ್ಕೆ ಸಿದ್ಧತೆ ನಡೆದಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.