ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿತ್ರದುರ್ಗದ ಮುರುಘರಾಜೇಂದ್ರ ಮಠ: ಫೆ.16ಕ್ಕೆ ಅಧ್ಯಾತ್ಮ ಚಿಂತನೆಯ ಶಿವಯೋಗ ಸಂಭ್ರಮ

Last Updated 7 ಫೆಬ್ರುವರಿ 2020, 10:07 IST
ಅಕ್ಷರ ಗಾತ್ರ

ತುಮಕೂರು: ಚಿತ್ರದುರ್ಗದ ಮುರುಘರಾಜೇಂದ್ರ ಮಠವು ಬೆಂಗಳೂರಿನಲ್ಲಿ ಫೆ.16ರಂದು ‘ಶಿವಯೋಗ ಸಂಭ್ರಮ: ಸರ್ವ ಶರಣರ ಸಮ್ಮೇಳನ’ ಆಯೋಜಿಸಿದೆ.

ಜಾಗತಿಕ ಶಾಂತಿ ಹಾಗೂ ಅಧ್ಯಾತ್ಮಿಕ ಪ್ರಗತಿಯ ಕುರಿತು ಆಲೋಚಿಸಲು ಈ ಸಮ್ಮೇಳನ ಆಯೋಜಿಸಲಾಗಿದೆ ಎಂದು ಮುರುಘರಾಜೇಂದ್ರ ಮಠದ ನಾಯಕನಹಟ್ಟಿ ಶಾಖಾ ಮಠದ ಅಧ್ಯಕ್ಷ ತಿಪ್ಪೇರುದ್ರ ಸ್ವಾಮೀಜಿ ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಗುರುವಾರ ಅವರು ಮಾತನಾಡಿದರು.

ಸಮ್ಮೇಳನದಲ್ಲಿ ಲಿಂಗ ದೀಕ್ಷೆ ನೀಡಲಾಗತ್ತದೆ. ಅಂಗೈಯಲ್ಲಿ ಇಟ್ಟುಕೊಂಡು ಪೂಜೆ ಮಾಡಬಹುದಾದ 25,000 ಲಿಂಗಗಳನ್ನು ವಿತರಿಸಲಾಗುತ್ತದೆ. ಧ್ಯಾನ ಶಿಬಿರವೂ ಇರಲಿದೆ ಎಂದು ಅವರು ಮಾಹಿತಿ ನೀಡಿದರು.

ಕೋಮುಭಾವನೆಯಿಂದ ಅಶಾಂತಿಯತ್ತ ಸಾಗಿರುವ ಸಮಾಜವನ್ನು ಶಾಂತಿಯೆಡೆಗೆ ತರಲು ಇಂತಹ ಚಿಂತನಾ ಸಮಾವೇಶ ಹಮ್ಮಿಕೊಳ್ಳಲಾಗುತ್ತಿದೆ. ಬಸವಣ್ಣ, ಗಾಂಧೀಜಿ ಅವರ ಆದರ್ಶಗಳನ್ನು ಪ್ರಸಾರ ಮಾಡುವ ಉದ್ದೇಶ ಈ ಕಾರ್ಯಕ್ರಮದಲ್ಲಿದೆ ಎಂದು ಹೇಳಿದರು.

ಈ ಸಮ್ಮೇಳನದಲ್ಲಿ ಭಾಗವಹಿಸಲು ಬೌದ್ಧ ಧರ್ಮಗುರು ದಲೈಲಾಮಾ, ಈಶಾ ಪ್ರತಿಷ್ಠಾನದ ಜಗ್ಗಿ ವಾಸುದೇವ್, ಧರ್ಮಸ್ಥಳದ ವೀರೇಂದ್ರ ಹೆಗ್ಗಡೆ, ಆರ್ಟ್‌ ಆಫ್‌ ಲೀವಿಂಗ್‌ನ ಶ್ರೀಶ್ರೀ ರವಿಶಂಕರ್‌ ಗುರೂಜಿ, ಸುತ್ತೂರು ಮಠದ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಸಿದ್ಧಗಂಗಾ ಮಠದ ಅಧ್ಯಕ್ಷ ಸಿದ್ಧಲಿಂಗ ಸ್ವಾಮೀಜಿ ಒಪ್ಪಿಕೊಂಡಿದ್ದಾರೆ ಎಂದು ಅವರು ತಿಳಿಸಿದರು.

ಸಮ್ಮೇಳನದಲ್ಲಿ ಭಾಗವಹಿಸಲು ಈಗಾಗಲೇ 75,000 ಜನರು ನೋಂದಣಿ ಮಾಡಿಕೊಂಡಿದ್ದಾರೆ. ಎರಡು ಲಕ್ಷ ಜನರು ಸೇರುವ ನಿರೀಕ್ಷೆ ನಮ್ಮದಾಗಿದೆ. ವಾಹನ ಮಾಡಿಕೊಂಡು ಬರುವವರು ಸಮಾವೇಶದ ಬ್ಯಾನರ್‌ ಅನ್ನು ವಾಹನದ ಮುಂಭಾಗದಲ್ಲಿ ಕಟ್ಟಿಕೊಂಡು ಬರಬೇಕು. ಅದರಿಂದ ಟೋಲ್‌ ಶುಲ್ಕದ ವಿನಾಯಿತಿ ಸಿಗುತ್ತದೆ. ಟೋಲ್‌ ಕಂಪನಿಗಳೊಂದಿಗೆ ಮಾತುಕತೆ ನಡೆಸಿ, ವಿನಾಯಿತಿ ಪಡೆದಿದ್ದೇವೆ ಎಂದು ಅವರು ಹೇಳಿದರು.

ತುಮಕೂರಿನಿಂದ ಎಷ್ಟೇ ಸಾವಿರ ಜನರು ಬಂದರೂ ಅವರಿಗೆ ಬಸ್‌ ಹಾಗೂ ಊಟದ ವ್ಯವಸ್ಥೆ ಮಾಡುತ್ತೇವೆ ಎಂದು ಅವರು ಹೇಳಿದರು.

ಈ ಸಮಾವೇಶಕ್ಕಾಗಿ ರಾಜ್ಯದ ವಿವಿಧೆಡೆಯಿಂದ ಬರುವ ಭಕ್ತರಿಗಾಗಿ 1,500 ಸರ್ಕಾರಿ ಬಸ್‌, 250 ಖಾಸಗಿ ಬಸ್‌ ವ್ಯವಸ್ಥೆ ಮಾಡಲಾಗುತ್ತಿದೆ. ಈ ಅಧ್ಯಾತ್ಮಿಕ ಮೇಳಕ್ಕೆ ₹5 ಕೋಟಿ ವೆಚ್ಚವಾಗುವ ಅಂದಾಜಿದೆ. ಇದನ್ನು ಭಕ್ತಾದಿಗಳಿಂದಲೇ ಸಂಗ್ರಹಿಸಲಾಗುತ್ತಿದೆ ಎಂದು ಸ್ವಾಮೀಜಿ ಮಾಹಿತಿ ನೀಡಿದರು.

ತುಮಕೂರು ಬಸವ ಕೇಂದ್ರದ ಅಧ್ಯಕ್ಷೆ ಸಿದ್ಧಗಂಗಮ್ಮ, ಜಯದೇವ ವಸತಿ ನಿಲಯದ ಖಜಾಂಚಿ ಡಿ.ಬಿ.ಶಿವಾನಂದ, ಟ್ರಸ್ಟಿ ಲೋಕೇಶ್ವರಪ್ಪ, ರಾಮಕೃಷ್ಣಪ್ಪ, ಟಿ.ಚಂದ್ರಶೇಖರ್‌ ಇದ್ದರು.

ಸಮ್ಮೇಳನ ನಡೆಯುವ ಸ್ಥಳ: ಬೆಂಗಳೂರು ಅಂತರರಾಷ್ಟ್ರೀಯ ವಸ್ತು ಪ್ರದರ್ಶನ ಕೇಂದ್ರ, ನಂದಿ ಮೈದಾನ, ನೈಸ್‌ ರಸ್ತೆ ಬದಿ, ತುಮಕೂರು ರಸ್ತೆ.

ಮಾಹಿತಿಗೆ: 9972982155

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT