ಸೋಮವಾರಪೇಟೆ (ಕೊಡಗು): ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಎನ್ನುವ ದೇಶದ್ರೋಹಿಗಳಿಗೆ ಕಂಡಲ್ಲಿ ಗುಂಡಿಕ್ಕಬೇಕು’ ಎಂದು ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಇಲ್ಲಿ ಸೋಮವಾರ ಕರೆ ನೀಡಿದರು.
‘ಇತ್ತೀಚಿನ ದಿನಗಳಲ್ಲಿ ದೇಶದ್ರೋಹದ ಹೇಳಿಕೆಗಳು ಹೆಚ್ಚಾಗುತ್ತಿವೆ. ವಿದ್ಯಾರ್ಥಿನಿ ಅಮೂಲ್ಯ ‘ಪಾಕಿಸ್ತಾನಕ್ಕೆ ಜಿಂದಾಬಾದ್’ ಎಂದು ಘೋಷಣೆ ಕೂಗಿದ್ದಾರೆ. ಖಾಸಗಿ ಕಂಪನಿ ಉದ್ಯೋಗಿ ಆರ್ದ್ರಾ ‘ಕಾಶ್ಮೀರ ಮುಕ್ತಿ’ ಭಿತ್ತಿಪತ್ರ ಪ್ರದರ್ಶಿಸಿದ್ದಾರೆ. ಇಂತಹವರಿಗೆ ಕಂಡಲ್ಲಿ ಗುಂಡಿಕ್ಕಿ’ ಎಂದು ಹೇಳಿದರು.
‘ಭಾರತದಲ್ಲಿ ನೆಲೆ ನಿಂತು ಪರದೇಶಕ್ಕೆ ಜೈ ಎನ್ನುವ ದೇಶದ್ರೋಹಿಗಳಿವರು. ಇವರಿಗೆ ನೀರು, ಗಾಳಿ, ಆಹಾರ ಎಲ್ಲವೂ ಈ ದೇಶದ್ದೇ ಬೇಕು. ಆದರೆ, ಇವರ ದೇಶಪ್ರೇಮ ಮಾತ್ರ ಪಾಕಿಸ್ತಾನಕ್ಕೆ. ಆ ದೇಶಕ್ಕೆ ತಮ್ಮ ನಿಷ್ಠೆ ತೋರಿಸುತ್ತಾರೆ’ ಎಂದು ಕಿಡಿಕಾರಿದರು.
‘ದೇಶಕ್ಕೆ ಅಗೌರವ ತೋರಿಸಿ, ಪಾಕಿಸ್ತಾನದ ಬಗ್ಗೆ ವಾತ್ಸಲ್ಯವಿರುವವರು ಅಲ್ಲಿಗೆ ಹೋಗಿ ನೆಲೆಸಲಿ’.‘ದೇಶದ್ರೋಹಿಗಳ ಗಡಿಪಾರು ಮಾಡದಿದ್ದಲ್ಲಿ ದೇಶಕ್ಕೆ ಗಂಡಾಂತರ ಎದುರಾಗಲಿದೆ’ ಎಂದು ರಂಜನ್ ಎಚ್ಚರಿಸಿದರು.