ಲಿಂಗಸುಗೂರು:ಪಟ್ಟಣದ ಹೊಸ ಬಸ್ ನಿಲ್ದಾಣದ ಹತ್ತಿರ ನಾಲ್ವರು ಯುವಕರ ತಂಡವೊಂದು ರಿವಾಲ್ವರ್ನಿಂದ ಗಾಳಿಯಲ್ಲಿ ಗುಂಡು ಹಾರಿಸಿ ಯುವಕನೊಬ್ಬನನ್ನು ಅಪಹರಿಸಿರುವ ಘಟನೆ ಶನಿವಾರ ಮಧ್ಯಾಹ್ನ ನಡೆದಿದೆ.
ಸ್ನೇಹಿತರಂತೆ ಮಾತನಾಡಿಸುತ್ತಾ ನಿಂತಿದ್ದ ದುಷ್ಕರ್ಮಿಗಳು ಇದ್ದಕ್ಕಿದ್ದಂತೆ ಯುವಕನನ್ನು ಎಳೆದು ಒತ್ತಾಯ ಪೂರ್ವಕವಾಗಿ ಕಾರಿನಲ್ಲಿ ನೂಕಿದ್ದಾರೆ. ಇದನ್ನು ಗಮನಿಸಿ ಸಾರ್ವಜನಿಕರು ನೆರವಿಗೆ ಹೋದಾಗ ಗುಂಡು ಹಾರಿಸಿ, ಮಾರಕಾಸ್ತ್ರ ತೋರಿಸಿ ಹೆದರಿಸಿದ್ದಾರೆ.
‘ಸುಮಾರು 25 ವರ್ಷದ ಯುವಕ ಬಿಡಿಸಿಕೊಳ್ಳಲು ಸಾಕಷ್ಟು ಪ್ರಯತ್ನ ನಡೆಸಿದ. ನೆರವಿಗೆ ಹೋದವರಿಗೆ ಬೆದರಿಕೆ ಹಾಕಿದರು. ಆತ ಯಾರು? ಅಪಹರಣಕ್ಕೆ ಕಾರಣ ಏನೆಂಬುದು ತಿಳಿಯಲಿಲ್ಲ’ ಎಂದು ಪ್ರತ್ಯಕ್ಷದರ್ಶಿಗಳು ಮಾಹಿತಿ ನೀಡಿದರು.