ತುಮಕೂರು: ‘ಶಿವಕುಮಾರ ಸ್ವಾಮೀಜಿ ಅವರಿಗೆ ಶ್ವಾಸಕೋಶದ ಸೋಂಕು ದಿನದಿಂದ ದಿನಕ್ಕೆ ಕಡಿಮೆ ಆಗುತ್ತಿದೆ. ಆದರೆ ಸ್ವಂತ ಉಸಿರಾಟಕ್ಕೆ ಶಕ್ತಿ ಬಂದಿಲ್ಲ’ ಎಂದು ಸಿದ್ಧಗಂಗಾ ಆಸ್ಪತ್ರೆ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸ್ವಾಮೀಜಿ ಆಪ್ತ ವೈದ್ಯ ಡಾ.ಪರಮೇಶ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಸ್ವಾಮೀಜಿ ಅವರಿಗೆ ಉಸಿರಾಟದ ಶಕ್ತಿ ಕಡಿಮೆ ಇದೆ. ಕೃತಕ ಉಸಿರಾಟದ ವ್ಯವಸ್ಥೆ ಕಲ್ಪಿಸಲಾಗಿದೆ. ಕೃತಕ ಉಸಿರಾಟ ತೆಗೆದರೆ ಎರಡು ತಾಸಿಗೆ ಸುಸ್ತಾಗುತ್ತಾರೆ’ ಎಂದು ಮಾಹಿತಿ ನೀಡಿದರು.
‘ರಕ್ತದೊತ್ತಡ, ನಾಡಿಮಿಡಿತ ಸ್ಥಿರವಾಗಿದೆ. ದೇಹದಲ್ಲಿನ ಪೋಷಕಾಂಶ ಸ್ಥಿರವಾಗಿದ್ದ ಕಾರಣ ಶುಕ್ರವಾರ ಅಲ್ಬುಮಿನ್ ಪ್ರೋಟಿನ್ ಅಂಶವನ್ನು ಬಾಹ್ಯವಾಗಿ ಕೊಟ್ಟಿರಲಿಲ್ಲ. ಶನಿವಾರ ಪೋಷಕಾಂಶ ಕಡಿಮೆ ಆಯಿತು. ಅಲ್ಬುಮಿನ್ ಕೊಡಲಾಗಿದೆ. ರೋಗ ನಿರೋಧಕ ಶಕ್ತಿ ಚೇತರಿಕೆ ಆಗಬೇಕು’ ಎಂದರು.