ಬೆಂಗಳೂರು, ತುಮಕೂರು:ಚೆನ್ನೈನ ರೇಲಾ ಇನ್ಸ್ಟಿಟ್ಯೂಟ್ ಅಂಡ್ ಮೆಡಿಕಲ್ ಸೆಂಟರ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸಿದ್ಧಗಂಗಾ ಮಠದ ಶಿವಕುಮಾರ ಸ್ವಾಮೀಜಿ ಅವರನ್ನು ಶುಕ್ರವಾರ ಭೇಟಿ ಮಾಡಿರುವ ಮುಖ್ಯಂಮತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಿಎಂಗಳಾದ ಬಿ.ಎಸ್.ಯಡಿಯೂರಪ್ಪ, ಎಸ್.ಎಂ.ಕೃಷ್ಣ ಅವರು ಶ್ರೀಗಳ ಆರೋಗ್ಯ ವಿಚಾರಿಸಿದ್ದಾರೆ.
ಇಷ್ಟಲಿಂಗ ಪೂಜೆ ಮಾಡಿದ ಶ್ರೀ
ಶಸ್ತ್ರಚಿಕಿತ್ಸೆಗೊಳಗಾದ ಸಿದ್ಧಗಂಗಾಮಠದ ಡಾ.ಶಿವಕುಮಾರ ಸ್ವಾಮೀಜಿ ಅವರ ಆರೋಗ್ಯ ದಿನದಿಂದ ದಿನಕ್ಕೆ ಚೇತರಿಕೆ ಕಂಡಿದೆ. ಶುಕ್ರವಾರ ಎಳನೀರು, ಹಣ್ಣಿನ ರಸ ಮತ್ತು ಇಡ್ಲಿ ಸೇವನೆ ಮಾಡಿದ್ದಾರೆ. ಇಷ್ಟಲಿಂಗ ಪೂಜೆಯನ್ನೂ ನೆರವೇರಿಸಿದ್ದಾರೆ.
ವಿಶೇಷ ವಾರ್ಡಿನಲ್ಲಿಯೇ ಸ್ವಾಮೀಜಿ ಆರೈಕೆದಾರರು ವೈದ್ಯರ ಸೂಚನೆಯಂತೆ ಸ್ವಾಮೀಜಿ ಅವರನ್ನು ನಡೆದಾಡಿಸಿದ್ದಾರೆ. ಅತೀ ಗಣ್ಯರನ್ನು ಹೊರತುಪಡಿಸಿ ಬೇರೆಯವರಿಗೆ ಸ್ವಾಮೀಜಿ ಭೇಟಿಗೆ ನಿರ್ಬಂಧಿಸಲಾಗಿದೆ. ಗಣ್ಯರೊಂದಿಗೆ ತೆರಳುವ ಆಪ್ತರೂ ಮೊಬೈಲ್ಗಳನ್ನು ವಾರ್ಡ್ಗೆ ತೆಗೆದುಕೊಂಡು ಹೋಗಲು ಅವಕಾಶ ನೀಡಿರಲಿಲ್ಲ.
ಶೀಘ್ರ ಗುಣಮುಖರಾಗಲಿ
ಶ್ರೀಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ಹೆಚ್.ಡಿ.ಕುಮಾರಸ್ವಾಮಿ, ಶ್ರೀಗಳು ಶೀಘ್ರವೇ ಗುಣಮುಖರಾಗಿ ಜನತಾ ಜನಾರ್ದನನ ಸೇವೆಯಲ್ಲಿ ತೊಡಗಲಿ. ಶ್ರೀಗಳು ಮಾಡುತ್ತಿರುವ ತ್ರಿವಿಧ ದಾಸೋಹ ಕೈಂಕರ್ಯ ಇಡೀ ದೇಶಕ್ಕೆ ಮಾದರಿಯಾಗಿದ್ದು ಅವರ ಆಶೀರ್ವಾದ ಎಲ್ಲರ ಮೇಲೂ ನಿರಂತರವಾಗಿರಲಿ ಎಂದು ಪ್ರಾರ್ಥಿಸುತ್ತೇನೆ ಎಂದು ಈ ಸಂದರ್ಭದಲ್ಲಿ ತಿಳಿಸಿದರು.
ಸಾರಿಗೆ ಸಚಿವ ಡಿ.ಸಿ.ತಮ್ಮಣ್ಣ, ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್, ವಿಧಾನ ಪರಿಷತ್ ಸದಸ್ಯ ಬೋಜೇಗೌಡ ಜತೆಗಿದ್ದರು.
ಎಸ್.ಎಂ.ಕೃಷ್ಣ, ಬಿ.ಎಸ್.ಯಡಿಯೂರಪ್ಪ ಭೇಟಿ
ಬೆಳಿಗ್ಗೆ ಸ್ವಾಮೀಜಿ ಅವರನ್ನು ಭೇಟಿ ಮಾಡಿದ್ದ ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ ಅವರು, ಸ್ವಾಮೀಜಿಯವರು ನಮ್ಮೆಲ್ಲರ ಆಸ್ತಿ. ಆರೋಗ್ಯವಾಗಿದ್ದು, ಸಂತೋಷವಾಯಿತು ಬೇಗ ಮಠಕ್ಕೆ ಬರ್ತಾರೆ. ಭಕ್ತರು ಆತಂಕ ಪಡುವ ಅಗತ್ಯವಿಲ್ಲ. ನಾನೂ ಕೂಡಾ ವಾರ್ಡಿನ ಒಳಗಡೆ ಹೋಗಲಿಲ್ಲ. ದೂರದ ಕಿಟಕಿಯಿಂದಲೇ ನೋಡಿದ್ದೇನೆ. ಸೋಂಕು ತಗಲುವ ಸಾಧ್ಯತೆ ಇರುವುದರಿಂದ ವೈದ್ಯರು ಭಕ್ತರ ಭೇಟಿಗೆ ನಿರ್ಬಂಧಿಸಿದ್ದಾರೆ. ಭಕ್ತರಾದ ನಾವೆಲ್ಲ ಸಹಕರಿಸಬೇಕು ಎಂದು ಹೇಳಿದರು.
ಮಧ್ಯಾಹ್ನ ಭೇಟಿ ನೀಡಿದ್ದ ವಿಧಾನ ಸಭೆ ವಿರೋಧ ಪಕ್ಷದ ನಾಯಕ ಬಿ.ಎಸ್. ಯಡಿಯೂರಪ್ಪ ಮಾತನಾಡಿ, ‘ಸಿದ್ಧಗಂಗಾ ಶ್ರೀಗಳ ದರ್ಶನ ಪಡೆದಿದ್ದು, ಅವರು ಆರೋಗ್ಯವಾಗಿದ್ದಾರೆ. ಅವರಿಗೆ ಚಿಕಿತ್ಸೆ ನೀಡಿದ ಡಾ.ಮಹಮ್ಮದ್ ರೇಲಾ ಅವರಿಗೆ ನಾಡಿನ ಆರುವರೆ ಕೋಟಿ ಜನರ ಪರವಾಗಿ ಅಭಿನಂದಿಸುತ್ತೇನೆ. ಸ್ವಾಮೀಜಿಯವರು ಬೇಗ ಮಠಕ್ಕೆ ಬರಲಿದ್ದಾರೆ ಎಂದು ಹೇಳಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.