ತುಮಕೂರು: ನಗರದ ಸಿದ್ಧಗಂಗಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಡಾ.ಶಿವಕುಮಾರ ಸ್ವಾಮೀಜಿ ಅರೋಗ್ಯವನ್ನು ಬೆಂಗಳೂರಿನ ತಜ್ಞ ವೈದ್ಯರ ತಂಡವು ಶುಕ್ರವಾರ ತಪಾಸಣೆ ನಡೆಸಿತು.
ಜಯದೇವ ಹೃದ್ರೋಗ ಆಸ್ಪತ್ರೆಯ ಮುಖ್ಯಸ್ಥ ಡಾ.ಸಿ.ಎನ್.ಮಂಜುನಾಥ್ ಅವರ ನೇತೃತ್ವದಲ್ಲಿ ರಾಜೀವಗಾಂಧಿ ಎದೆರೋಗ ಚಿಕಿತ್ಸಾ ಸಂಸ್ಥೆ ನಿರ್ದೇಶಕ ಡಾ.ನಾಗರಾಜ್, ಜಯದೇವ ಆಸ್ಪತ್ರೆಯ ಅರಿವಳಿಕೆ ವಿಭಾಗದ ಮುಖ್ಯಸ್ಥ ಎನ್.ಮಂಜುನಾಥ್, ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ ವೈದ್ಯ ಡಾ.ರವಿ ಅರ್ಜುನ್ ಅವರ ತಂಡ ತಪಾಸಣೆ ನಡೆಸಿತು.
ಡಾ.ಸಿ.ಎನ್.ಮಂಜುನಾಥ್ ಮಾತನಾಡಿ, ‘ಸ್ವಾಮೀಜಿ ಅವರಿಗೆ ಸ್ವಂತ ಉಸಿರಾಟದ ಶಕ್ತಿ ಕಡಿಮೆ ಇದೆ. ಕೃತಕ ಉಸಿರಾಟ ಮುಂದುವರಿಸುವ ಅವಶ್ಯಕತೆ ಇದೆ. ದೇಹದಲ್ಲಿನ ರೋಗ ನಿರೋಧಕ ಶಕ್ತಿ ಕಡಿಮೆಯಾಗಿದೆ. ಹೃದಯ ಬಡಿತ, ನಾಡಿಮಿಡಿತ, ರಕ್ತದೊತ್ತಡ ಸ್ಥಿರವಾಗಿದೆ’ ಎಂದರು.
‘ಪ್ರೊಟೀನ್ ಅಂಶ ಸುಧಾರಣೆಯಾಗಿದೆ. ಶ್ವಾಸಕೋಶ ಸೋಂಕಿಗೆ ವೈದ್ಯರು ಉತ್ತಮ ರೀತಿ ಚಿಕಿತ್ಸೆ ನೀಡುತ್ತಿದ್ದಾರೆ. ಶ್ವಾಸಕೋಶ ಕಾರ್ಯಕ್ಷಮತೆಯನ್ನು ಕಾಲವೇ ನಿರ್ಧರಿಸುತ್ತದೆ. ಆದಷ್ಟು ಬೇಗ ಗುಣಮುಖರಾಗುವ ಆಶಾವಾದವಿದೆ’ ಎಂದು ಹೇಳಿದರು.
ಸಿದ್ಧಗಂಗಾ ಆಸ್ಪತ್ರೆಯ ತೀವ್ರ ನಿಗಾ ಘಟಕ ವ್ಯವಸ್ಥೆಯು ವಿಶ್ವ ದರ್ಜೆಯ ಮಟ್ಟದ್ದಾಗಿದೆ. ಇಲ್ಲಿಂದ ಸ್ವಾಮೀಜಿಯವರನ್ನು ಸ್ಥಳಾಂತರ ಮಾಡಿ ಚಿಕಿತ್ಸೆ ನೀಡುವ ಅವಶ್ಯಕತೆ ಇಲ್ಲ ಎಂದರು.
ಸುತ್ತೂರುಶ್ರೀ ಭೇಟಿ: ‘ಉಸಿರಾಟದ ತೊಂದರೆ ಹೊರತುಪಡಿಸಿ ಸ್ವಾಮೀಜಿ ಆರೋಗ್ಯವಾಗಿದ್ದಾರೆ’ ಎಂದು ಶ್ರೀಗಳ ಆರೋಗ್ಯ ವಿಚಾರಿಸಿದ ಬಳಿಕ ಸುತ್ತೂರು ಮಠದ ಡಾ.ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ತಿಳಿಸಿದರು.