ಬಾಗಲಕೋಟೆ: ‘ನೆರೆ ಸಂತ್ರಸ್ತರು ದೀಪಾವಳಿ ಹಬ್ಬವನ್ನು ಬಸ್ ನಿಲ್ದಾಣ, ಬೀದಿಯಲ್ಲಿ ಆಚರಿಸಿದ್ದಾರೆ ಎಂದು ಮಾಧ್ಯಮಗಳಲ್ಲಿ ಬಂದಿದೆ. ಇದು ಸುಳ್ಳಾ?..‘ನೆರೆ ಸಂತ್ರಸ್ತರ ವಾಸ್ತವ ಸ್ಥಿತಿಗತಿ ತಿಳಿಯಬೇಕಾದರೆ ‘ಪ್ರಜಾವಾಣಿ-ಡೆಕ್ಕನ್ಹೆರಾಲ್ಡ್ನಲ್ಲಿ ಬಂದಿರುವ ವರದಿ ಓದಿ' ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಗೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸಲಹೆ ನೀಡಿದರು.
ಜಮಖಂಡಿಯಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ನಮ್ಮ ಜಿಲ್ಲೆಯಲ್ಲಿಯೇ (ಬಾಗಲಕೋಟೆ) ಸಂತ್ರಸ್ತರ ಸ್ಥಿತಿ ಹೀಗಿರುವುದು ನನಗೆ ಬಹಳ ನೋವಾಯ್ತು. ಇದನ್ನೆಲ್ಲಾ ನೋಡಿದರೆ ಈ ಸರ್ಕಾರ ಬದುಕಿದೆಯೋ, ಸತ್ತಿದೆಯೋ ಎಂದು ಈಗಲೂ ನನಗೆ ಅನುಮಾನವಿದೆ’ ಎಂದರು.
‘ಸಿದ್ದರಾಮಯ್ಯ ವಿರೋಧ ಪಕ್ಷದ ನಾಯಕನ ಸ್ಥಾನದಲ್ಲಿದ್ದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಟ್ವಿಟ್ ಮಾಡಿದ್ದಾರೆ. ಹಾಗಾದರೆ ನೆರೆ ಸಂತ್ರಸ್ತರ ಪರವಾಗಿ ವಿರೋಧಪಕ್ಷದ ನಾಯಕನಾಗಿ ನಾನು ಮಾತನಾಡದೇ ಮತ್ಯಾರು ಮಾತನಾಡಬೇಕು' ಎಂದು ಪ್ರಶ್ನಿಸಿದರು.
‘ಪ್ರವಾಹ ಸಂತ್ರಸ್ತರನ್ನು ಕಡೆಗಣಿಸಿದ್ದ ಕಾರಣಕ್ಕೆ ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಅಲ್ಲಿನ ಮತದಾರರು ಬಿಜೆಪಿಗೆ ತಕ್ಕ ಪಾಠ ಕಲಿಸಿದರು. ಶೀಘ್ರ ರಾಜ್ಯದಲ್ಲಿ ನಡೆಯಲಿರುವ 15 ಕ್ಷೇತ್ರಗಳ ಉಪ ಚುನಾವಣೆಯಲ್ಲೂ ಅದು ಮರುಕಳಿಸಲಿದೆ' ಎಂದು ಎಚ್ಚರಿಸಿದರು.
‘ನೆರೆ ಸಂತ್ರಸ್ತರ ವಿಚಾರದಲ್ಲಿ ಯಡಿಯೂರಪ್ಪಗೆ ಪ್ರಧಾನಿ ನರೇಂದ್ರ ಮೋದಿ ಸಹಾಯ ಮಾಡುತ್ತಿಲ್ಲ. ಯಡಿಯೂರಪ್ಪ ಸ್ಥಿತಿ ನೋಡಿದರೆ ಪಾಪ ಅನಿಸುತ್ತದೆ. ಸಂತ್ರಸ್ತರಿಗೆ ₹38 ಸಾವಿರ ಕೋಟಿ ನೆರವು ಕೋರಿದರೆ ಕೇಂದ್ರ ಸರ್ಕಾರ ಬರೀ ₹1,200 ಕೋಟಿ ಕೊಟ್ಟಿದೆ. ರಾಜ್ಯದಲ್ಲಿ ಪ್ರವಾಹ ಬಂದರೂ ಪ್ರಧಾನಿ ಬರಲೇ ಇಲ್ಲ’ ಎಂದು ಟೀಕಿಸಿದರು.