ಸಾತಾರ(ಮಹಾರಾಷ್ಟ್ರ): ಮಹಾರಾಷ್ಟ್ರದ ಸಾತಾರ ಜಿಲ್ಲೆಯ ಕಂಬಾಟಗಿ ಬಳಿ ನಡೆದ ಭೀಕರ ಅಪಘಾತದಲ್ಲಿ ಮೂವರು ಮಕ್ಕಳು, ಇಬ್ಬರು ಮಹಿಳೆಯರು ಸೇರಿ 18 ಜನರು ದುರ್ಮರಣಕ್ಕೆ ಈಡಾಗಿದ್ದಾರೆ.
ಟೆಂಪೊ ಮುಂಬೈ–ಬೆಂಗಳೂರು ರಾಷ್ಟ್ರೀಯ ಹೆದ್ದಾರಿಗೆ ಸಾಗುವಾಗ ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದ ಪರಿಣಾಮ ಈ ದುರ್ಘಟನೆ ಜರುಗಿದೆ.
ಮೃತರು ವಿಜಯಪುರ ಜಿಲ್ಲೆಯ ಮದಬಾವಿ ತಾಂಡಾ, ತಿಕೋಟ ಸೇರಿದಂತೆ ವಿವಿಧ ಹಳ್ಳಿಗಳ ನಿವಾಸಿಗಳು. ಇವರು ಹೊಟ್ಟೆ ಹೊರೆಯಲು ಪುಣೆಗೆ ಗೂಳೆ ಹೋಗುತಿದ್ದರು ಎನ್ನಲಾಗುತ್ತಿದೆ. ಮೃತರ ಬಗ್ಗೆ ವಿಚಾರಿಸಲು ವಿಜಯಪುರ ಎಸ್ಪಿ ಪ್ರಕಾಶ ನಿಕ್ಕಂ ತಿಕೋಟ ಹಾಗೂ ಗ್ರಾಮೀಣ ಪೊಲೀಸ್ ಠಾಣೆಗೆ ಸೂಚನೆ ನೀಡಿದ್ದಾರೆ.
ಅಪಘಾತಕ್ಕೀಡಾದ ಟೆಂಪೊದಲ್ಲಿ 35 ಜನರು ಪ್ರಯಾಣಿಸುತ್ತಿದ್ದರು ಎಂದು ತಿಳಿದುಬಂದಿದೆ. ಗಾಯಾಳುಗಳನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ. ‘ಚಾಲಕನ ಅಜಾಗರೂಕತೆಯಿಂದ ಈ ಅಪಘಾತ ಸಂಭವಿಸಿರಬಹುದು’ ಎಂದು ಪೊಲೀಸರು ತಿಳಿಸಿದ್ದಾರೆ.