ಬೆಂಗಳೂರು: ಮೂರು ಲೋಕಸಭೆ ಹಾಗೂ ಎರಡು ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣಾ ಕಣದಲ್ಲಿ ಪ್ರಚಾರದ ಭರಾಟೆ ಬಿರುಸುಗೊಂಡಿದ್ದು, ಆಡಳಿತ ಪಕ್ಷ ಮತ್ತು ವಿರೋಧ ಪಕ್ಷದ ನಾಯಕರ ಮಧ್ಯೆ ಮಾತಿನ ಸಮರ ರಂಗೇರಿದೆ.
ಬಳ್ಳಾರಿ ಲೋಕಸಭಾ ಕ್ಷೇತ್ರದಲ್ಲಿ ಪಕ್ಷದ ಅಭ್ಯರ್ಥಿ ವಿ.ಎಸ್. ಉಗ್ರಪ್ಪ ಪರ ಪ್ರಚಾರ ಆರಂಭಿಸಿದ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ‘ಮೊಳಕಾಲ್ಮುರು ಶಾಸಕ ಶ್ರೀರಾಮುಲುಗೆ 371 ಜೆ ಅಂದರೆ ಏನೆಂದು ಗೊತ್ತಿಲ್ಲ. ಅವರಿಗೆ ಗೊತ್ತಿರುವುದು 326, 307, 323, 420 ಮಾತ್ರ. ಇಂಥವರಿಗೆ ಮತ ನೀಡಿದರೆ ಕ್ಷೇತ್ರದ ಅಭಿವೃದ್ಧಿ ಸಾಧ್ಯವೇ? ಈ ಹಿಂದೆ ಯಡಿಯೂರಪ್ಪನವರ ಜೊತೆ ಸೇರಿ ರಾಜ್ಯವನ್ನು ಲೂಟಿ ಮಾಡಿದ್ದಾರೆ. ಇಂಥವರನ್ನು ಅಧಿಕಾರದಿಂದ ದೂರವಿಡಿ’ ಎಂದರು.
‘ಸಂಸದರಾಗಿದ್ದಾಗ ಲೋಕಸಭೆಯಲ್ಲಿ ಅಥವಾ ಶಾಸಕರಾಗಿದ್ದಾಗ ವಿಧಾನಸಭೆಯಲ್ಲಿ ಒಂದು ದಿನವೂ ಶ್ರೀರಾಮುಲು ಮಾತನಾಡಿಲ್ಲ. ಬಳ್ಳಾರಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಯಾಗಿರುವ ಅವರ ಸಹೋದರಿ ಶಾಂತಾ ಅವರೂ ಈ ಹಿಂದೆ ಲೋಕಸಭೆಯಲ್ಲಿ ಮಾತನಾಡಿಲ್ಲ. ಈ ಸೌಭಾಗ್ಯಕ್ಕಾಗಿ ಅವರನ್ನು ಅಲ್ಲಿಗೆ ಕಳುಹಿಸಬೇಕು ಎಂದು ಪ್ರಶ್ನಿಸಿದ್ದರು.
ಇದಕ್ಕೆ ತಿರುಗೇಟು ಕೊಟ್ಟಿರುವ ಶ್ರೀರಾಮುಲು, ‘ವಿಧಾನಸಭೆ ಹಾಗೂ ಲೋಕಸಭೆಯಲ್ಲಿ ನಾನು ಮಾತನಾಡುವಾಗ ನೀವು ನಿದ್ದೆಯಲ್ಲಿದ್ದೀರಿ ಅನಿಸುತ್ತಿದೆ. ಸಂಸದರ ನಿಧಿಯ ಸಮರ್ಪಕ ಬಳಕೆಯಲ್ಲಿ ರಾಜ್ಯದಲ್ಲಿ ಮೊದಲ ಸ್ಥಾನದಲ್ಲಿದ್ದೇನೆ. 16ನೇ ಲೋಕಸಭೆ ಅವಧಿಯಲ್ಲಿ 20 ಚರ್ಚೆಗಳಲ್ಲಿಭಾಗವಹಿಸಿ, 572 ಪ್ರಶ್ನೆ ಕೇಳಿದ್ದೇನೆ’ ಎಂದು ಸಮರ್ಥಿಸಿಕೊಂಡಿದ್ದಾರೆ.
******
ಅದ್ಯಾವುದೋ ಪಕ್ಷ ಕಟ್ಟಿದ್ದ ಶ್ರೀರಾಮುಲು, ಬಿಜೆಪಿಯನ್ನು ಸೋಲಿಸುವುದಕ್ಕಾಗಿಯೇ ಹುಟ್ಟಿದ್ದೇನೆ ಎಂದು ಹೇಳಿಕೊಂಡಿದ್ದರು. ಅಂತಹ ದೊಡ್ಡವರ ಬಗ್ಗೆ ಮಾತನಾಡಬಾರದು.
- ಡಿ.ಕೆ. ಶಿವಕುಮಾರ್,ಜಲಸಂಪನ್ಮೂಲ ಸಚಿವ
ಶಿವಮೊಗ್ಗ ಲೋಕಸಭಾ ಕ್ಷೇತ್ರ ಯಡಿಯೂರಪ್ಪ ಕುಟುಂಬದ ಆಸ್ತಿಯೇ? ಅಪ್ಪ, ತಪ್ಪಿದರೆ ಮಗ ಜಹಗೀರು ಪಡೆದುಕೊಂಡಿದ್ದಾರೆಯೇ? ಈ ಬಾರಿ ಮಧು ಬಂಗಾರಪ್ಪ ಗೆಲುವು ನಿಶ್ಚಿತ
- ದಿನೇಶ್ ಗುಂಡೂರಾವ್, ಕೆಪಿಸಿಸಿ ಅಧ್ಯಕ್ಷ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.