ನವದೆಹಲಿ: ಎಲ್ಲ ಮುಖಂಡರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಪಕ್ಷ ಮುನ್ನಡೆಸುವಂತೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಸೂಚಿಸಿದರು.
ಬುಧವಾರ ತಮ್ಮನ್ನು ಭೇಟಿ ಮಾಡಿದ ಸಿದ್ದರಾಮಯ್ಯ ಅವರೊಂದಿಗೆ ರಾಜ್ಯ ರಾಜಕಾರಣ ಕುರಿತು ಅರ್ಧ ಗಂಟೆ ಕಾಲ ಚರ್ಚಿಸಿದ ಅವರು, ಪಕ್ಷದ ಅಭ್ಯುದಯದ ಹಿನ್ನೆಲೆಯಲ್ಲಿ ಎಲ್ಲ ಮುಖಂಡರ ವಿಶ್ವಾಸ ಅತ್ಯಗತ್ಯ ಎಂದು ಕಿವಿಮಾತು ಹೇಳಿದರು.
ಪಕ್ಷದ ಕೆಲವು ಮುಖಂಡರ ವಿರೋಧದ ನಡುವೆಯೂ ಸಿದ್ದರಾಮಯ್ಯ ಅವರನ್ನು ವಿಧಾನಸಭೆಯ ವಿಪಕ್ಷ ನಾಯಕನನ್ನಾಗಿ ಹೈಕಮಾಂಡ್ ಇತ್ತೀಚೆಗೆ ಆಯ್ಕೆ ಮಾಡಿತ್ತು. ಈ ಆಯ್ಕೆಯ ನಂತರ ಇದೇ ಮೊದಲ ಬಾರಿಗೆ ಸಿದ್ದರಾಮಯ್ಯ ವರಿಷ್ಠರನ್ನು ಭೇಟಿ ಮಾಡಿದರು.
15 ಕ್ಷೇತ್ರಗಳ ಉಪಚುನಾವಣೆಯ ಅಭ್ಯರ್ಥಿಗಳ ಆಯ್ಕೆ ಕುರಿತು ಸೋನಿಯಾ ಅವರೊಂದಿಗೆ ಚರ್ಚಿಸಲಾಯಿತು. ಪಕ್ಷದ ಮುಖಂಡ ಜಿ.ಪರಮೇಶ್ವರ ಅವರ ಶಿಕ್ಷಣ ಸಂಸ್ಥೆಗಳ ಮೇಲೆ ನಡೆದ ಆದಾಯ ತೆರಿಗೆ ದಾಳಿಯ ಕುರಿತೂ ಸೋನಿಯಾ ಮಾಹಿತಿ ಪಡೆದರು ಎಂದು ಸಿದ್ದರಾಮಯ್ಯ ಸುದ್ದಿಗಾರರಿಗೆ ತಿಳಿಸಿದರು.