ಚಿತ್ರದುರ್ಗ: ಏಕವಚನ ಮತ್ತು ಬಹುವಚನದ ವ್ಯತ್ಯಾಸ ಗೊತ್ತಿಲ್ಲದ ಸಿದ್ದರಾಮಯ್ಯ ಅವರಿಗೆ ವ್ಯಾಕರಣ ಬರುವುದಿಲ್ಲ ಎಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಆರೋಪಿಸಿದರು.
ಹಿರಿಯೂರು ತಾಲ್ಲೂಕಿನ ಹೊಸ ಯಳನಾಡು ಗ್ರಾಮದಲ್ಲಿ ಮಧ್ಯಮ ಪ್ರತಿನಿಧಿಗಳ ಜೊತೆ ಅವರು ಮಾತನಾಡಿದರು.
ಸಿದ್ದರಾಮಯ್ಯ ವ್ಯಾಕರಣ ಮೇಸ್ಟ್ರು. ಆದರೂ ವ್ಯಾಕರಣ ಗೊತ್ತಿಲ್ಲ. ನಾವು ಏಕವಚನ ಮತ್ತು ಬಹುವಚನ ಕಲಿತಿದ್ದೇವೆ. ಹಾಗಾಗಿ ಗೌರವ ಕೊಟ್ಟು ಮಾತನಾಡುತ್ತೇವೆ ಎಂದು ಹೇಳಿದರು.
ರೈತರು, ಹಾಲು ಉತ್ಪಾದಕರ ಬಗ್ಗೆ ಬಿಜೆಪಿಗೆ ಕಾಳಜಿ ಇದೆ. ಪ್ರಾದೇಶಿಕ ಸಮಗ್ರ ಆರ್ಥಿಕ ಸಹಭಾಗಿತ್ವ ಒಪ್ಪಂದ (ಆರ್ ಸಿ ಇ ಪಿ) ಬಗ್ಗೆ ರಾಜ್ಯ ಸಚಿವ ಸಂಪುಟದಲ್ಲಿ ಈ ಬಗ್ಗೆ ಚರ್ಚೆ ಮಾಡುತ್ತೇವೆ. ರೈತರ ಹಿತ ಕಾಪಾಡುವಂತೆ ಕೇಂದ್ರ ಸರ್ಕಾರದ ಗಮನ ಸೆಳೆಯುತ್ತೇವೆ ಎಂದರು.
ಅನರ್ಹ ಶಾಸಕರ ಕುರಿತು ಸುಪ್ರೀಂ ಕೋರ್ಟ್ ನೀಡುವ ತೀರ್ಪಿಗೆ ಕಾಯುತ್ತಿದ್ದೇವೆ. ಹಿಂದಿನ ಸ್ಪೀಕರ್ ನಿರ್ಧಾರ ಸರಿ ಇಲ್ಲ. ತೀರ್ಪು ಪ್ರಕಟವಾದ ಬಳಿಕ ತೀರ್ಮಾನ ಕೈಗೊಳ್ಳುತ್ತೇವೆ ಎಂದು ಪ್ರತಿಕ್ರಿಯೆ ನೀಡಿದರು.