ಚಿತ್ರದುರ್ಗ: ಪ್ರಜಾಪ್ರಭುತ್ವ ಬಿಟ್ಟು ಸರ್ವಾಧಿಕಾರಿಯಾಗಲು ಹೊರಟಿರುವ ನರೇಂದ್ರ ಮೋದಿ ಶ್ರೀಮಂತರ ಚೌಕಿದಾರರೇ ಹೊರತು, ಬಡವರ ಬಗ್ಗೆ ಕಾಳಜಿ ಹೊಂದಿದ ಪ್ರಧಾನಿ ಅಲ್ಲ ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದರು.
ಮೀಸಲು ಕ್ಷೇತ್ರದ ಮೈತ್ರಿ ಅಭ್ಯರ್ಥಿ ಬಿ.ಎನ್.ಚಂದ್ರಪ್ಪ ನಾಮಪತ್ರ ಸಲ್ಲಿಕೆ ಅಂಗವಾಗಿ ಸೋಮವಾರ ಏರ್ಪಡಿಸಿದ್ದ ಬಹಿರಂಗ ಸಭೆಯಲ್ಲಿ ಅವರು ಮಾತನಾಡಿದರು.
‘ಮೋದಿ ಭ್ರಮೆಯನ್ನು ಬಿತ್ತಿ, ಸುಳ್ಳು ಭರವಸೆಗಳನ್ನು ನೀಡಿದರು. ಇವರಷ್ಟು ಸುಳ್ಳು ಹೇಳಿದ ಪ್ರಧಾನಿ ದೇಶದ ಇತಿಹಾಸಲ್ಲಿ ಯಾರೂ ಇಲ್ಲ. ಮಾತು ಬಿಟ್ಟರೆ ಬೇರೆ ಯಾವ ಸಾಧನೆಯನ್ನೂ ಮಾಡಿಲ್ಲ. ಅವರೊಬ್ಬ ಜನದ್ರೋಹಿ ಹಾಗೂ ವಚನಭ್ರಷ್ಟ ರಾಜಕಾರಣಿ. ದೇಶಕ್ಕೆ ದೊಡ್ಡ ದ್ರೋಹ ಬಗೆದಿದ್ದಾರೆ’ ಎಂದು ಆರೋಪಿಸಿದರು.
‘ಅಚ್ಛೇ ದಿನ್ ಬರಲಿದೆ ಅಂತ ಹೇಳಿದ್ದರು. ಬಡವರಿಗೆ, ರೈತರಿಗೆ ಹಾಗೂ ಮಹಿಳೆಯರಿಗೆ ಒಳ್ಳೆಯ ದಿನಗಳು ಬರಲೇ ಇಲ್ಲ. ಇವರ ಆಡಳಿತದ ಅವಧಿಯಲ್ಲಿ ಅಂಬಾನಿ, ಅದಾನಿ, ವಿಜಯ ಮಲ್ಯ, ನೀರವ್ ಮೋದಿ ಸೇರಿ ಶ್ರೀಮಂತರಿಗೆ ಅಚ್ಛೆ ದಿನಗಳು ಬಂದಿವೆ’ ಎಂದು ಕಿಡಿಕಾರಿದರು.