ಮಂಗಳೂರು: ಸೋಮವಾರ ರಾತ್ರಿ ಮಂಗಳೂರು ಸಮೀಪದ ನೇತ್ರಾವತಿ ನದಿ ಸೇತುವೇ ಮೇಲೆ ನಿಗೂಢವಾಗಿ ಕಾಣೆಯಾಗಿದ್ದ ಸಿದ್ದಾರ್ಥ ಅವರ ಮೃತದೇಹ ಬುಧವಾರ ಮುಂಜಾನೆ ಪತ್ತೆಯಾಗಿದೆ.
ಸರಿಸುಮಾರು 36 ಗಂಟೆಗಳ ತೀವ್ರ ಶೋಧದ ನಂತರಹೊಯ್ಗೆಬಜಾರ್ನ ಅಳಿವೆ (ನದಿ ಮತ್ತು ಸಮುದ್ರ ಸೇರುವ ಸ್ಥಳ)ಬಾಗಿಲ ಬಳಿಬುಧವಾರ ಬೆಳಗ್ಗೆ 6.30ಕ್ಕೆಸಿದ್ದಾರ್ಥ್ ಅವರ ದೇಹ ಪತ್ತೆಯಾಗಿದೆ. ಮೃತದೇಹವನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ. ಅಲ್ಲಿ ಅವರ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಸ್ಥಳೀಯ ಮೀನುಗಾರರು ಬೆಳಗ್ಗೆ ಮೀನುಗಾರಿಕೆಗೆಂದು ತೆರಳಿದ್ದಾಗ ನದಿ ದಡದಲ್ಲಿ ಮೃತದೇಹ ಕಂಡಿದೆ. ಇದು ಸಿದ್ಧಾರ್ಥ ಅವರ ಮೃತದೇಹವೇ ಇರಬಹುದೇ ಎಂಬ ಸಂಶಯದೊಂದಿಗೆ ಹತ್ತಿರಕ್ಕೆ ತೆರಳಿದ ಮೀನುಗಾರರಿಗೆ ಆ ದೇಹ ಸಿದ್ಧಾರ್ಥ ಅವರದ್ದೇ ಎಂದು ಖಚಿತವಾಗಿದೆ.
ಈ ಕುರಿತು ಮಾತನಾಡಿರುವ ಮಂಗಳೂರು ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್, ಇಂದು ಮುಂಜಾನೆ 6.30ರಲ್ಲಿ ಮೃತದೇಹ ಪತ್ತೆಯಾಯಿತು. ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಲಾಗಿದೆ. ಮುಂದಿನ ವಿಧಿ ವಿಧಾನಗಳ ಬಗ್ಗೆ ಕುಟುಂಬ ಸದಸ್ಯರು ನಿರ್ಧರಿಸುತ್ತಾರೆ. ದೇಹವನ್ನು ವೆನ್ಲಾಕ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ತಿಳಿಸಿದರು.
ಚಟ್ನಹಳ್ಳಿಯ ಚೇತನಹಳ್ಳಿ ಎಸ್ಟೇಟ್ನಲ್ಲಿ ಸಿದ್ಧಾರ್ಥ ಅಂತ್ಯಸಂಸ್ಕಾರ
ಕುಟುಂಬದ ಸದಸ್ಯರಿಗೆ ಫೋಟೊ ಕಳುಹಿಸಲಾಗಿದೆ. ಅವರು ಮೃತದೇಹವನ್ನು ಗುರುತಿಸಿದ್ದಾರೆ. ಸಿದ್ದಾರ್ಥ ಅವರ ಜೇಬಿನಲ್ಲಿ ಅವರ ಹಳೆಯ ಮೊಬೈಲ್ ಪತ್ತೆಯಾಗಿದೆ.ಮೃತದೇಹದ ಮರಣೋತ್ತರ ಪರೀಕ್ಷೆ ನಡೆದ ಬಳಿಕ ಮುಂದಿನ ಕ್ರಮಗಳು ಜರಗಲಿವೆ. ಸಿದ್ದಾರ್ಥ ಅವರ ಆಪ್ತರಾಗಿದ್ದ ಶೃಂಗೇರಿ ಶಾಸಕ ಟಿ.ಡಿ.ರಾಜೇಗೌಡ ಅವರು ವೆನ್ಲಾಕ್ಆಸ್ಪತ್ರೆಯ ಆವರಣದಲ್ಲಿದ್ದು ಬೆಂಗಳೂರಿನಲ್ಲಿರುವ ಸಿದ್ದಾರ್ಥ ಅವರ ಕುಟುಂಬದ ಸದಸ್ಯರ ಜೊತೆ ಸಂಪರ್ಕದಲ್ಲಿದ್ದಾರೆ.ಕುಟುಂಬಸ್ಥರೆಲ್ಲರೂ ಇಲ್ಲಿಗೆ ಬಂದ ನಂತರ ಮೃತದೇಹವನ್ನು ಚಿಕ್ಕಮಗಳೂರಿನ ಚಟ್ನಹಳ್ಳಿಯ ಚೇತನಹಳ್ಳಿ ಎಸ್ಟೇಟ್ಗೆ ಕೊಂಡೊಯ್ಯಲಾಗುತ್ತದೆ ಎಂದು ಶಾಸಕ ಯು.ಟಿ ಖಾದರ್ ಅವರು ತಿಳಿಸಿದ್ದಾರೆ.
***
ಮರಣೋತ್ತರ ಪರೀಕ್ಷೆ ಬಳಿಕ ಸಿದ್ದಾರ್ಥ ಅವರ ಮೃತದೇಹವನ್ನು ಮೂಡಿಗೆರೆತಾಲ್ಲೂಕಿನ ಚೇತನಹಳ್ಳಿಯ ಎಸ್ಟೇಟ್ ಗೆ ತೆಗೆದುಕೊಂಡು ಹೋಗಲು ಕುಟುಂಬದ ಸದಸ್ಯರುತೀರ್ಮಾನಿಸಿದ್ದಾರೆ.
-ಟಿ.ಡಿ.ರಾಜೇಗೌಡ,ಶೃಂಗೇರಿ ಶಾಸಕ
***
ಸೋಮವಾರ ಬೆಳಗ್ಗೆ ಸಕಲೇಶಪುರಕ್ಕೆ ತೆರಳುವುದಾಗಿ ಹೇಳಿ ಹೋಗಿದ್ದ ಸಿದ್ಧಾರ್ಥ ಅವರು, ಮಂಗಳೂರಿಗೆ ಹೋಗಿದ್ದರು. ಮಾರ್ಗದುದ್ದಕ್ಕೂ ಅವರು ಹಲವರಿಗೆ ಕರೆ ಮಾಡಿ ‘ಐ ಆ್ಯಮ್ ಸಾರಿ’ ಎಂದು ಹೇಳುತ್ತಿದ್ದರು ಎಂದು ಅವರ ಚಾಲಕ ಹೇಳಿಕೊಂಡಿದ್ದರು.
#VGSiddharthaUpdate : ಸಿದ್ಧಾರ್ಥ ಅವರ ಮೃತದೇಹ ಮಂಗಳೂರಿನ ಹೊಗೈ ಬಜಾರ್ ಸಮುದ್ರ ಅಳಿವೆ ಬಾಗಿಲ ಬಳಿ ಪತ್ತೆಯಾಗಿದೆ.#VGSiddharthMissing
— DD Chandana News (@DDChandanaNews) July 31, 2019
ಕರ್ನಾಟಕದ ಕಾಫಿಗೆ ಜಾಗತಿಕ ಮಾರುಕಟ್ಟೆ ಕಲ್ಪಿಸಿದ, ದೇಶದಲ್ಲಿ ಕೆಫೆ ಸಂಸ್ಕೃತಿಗೆ ಅಡಿಪಾಯ ಹಾಕಿದೆ, ಸರಿಸುಮಾರು 50 ಸಾವಿರ ಮಂದಿಗೆ ಉದ್ಯೋಗ ಕಲ್ಪಿಸಿದ ಖ್ಯಾತಿ ಸಿದ್ಧಾರ್ಥ್ ಅವರದ್ದು.
***
ಸಿದ್ಧಾರ್ಥ ಅವರ ನಿಧನದ ಸುದ್ದಿಯಿಂದ ತೀವ್ರ ಆಘಾತವಾಗಿದೆ. ದೇಶಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ. ಸಿದ್ಧಾರ್ಥ ಅವರದು ತುಂಬಾ ಸರಳ ವ್ಯಕ್ತಿತ್ವ. ಸಾವಿರಾರು ಜನಕ್ಕೆ ಸ್ವಾಭಿಮಾನದಿಂದ ಬದುಕಲು ದಾರಿ ಮಾಡಿಕೊಟ್ಟಿದ್ದ ನಂದಾದೀಪ. ಈ ದಿನ ಆ ನಂದಾದೀಪ ಹಾರಿಹೋದ ಸುದ್ದಿ ಕೇಳಿ ನಮಗೆಲ್ಲಾ ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಇಡಿ ದೇಶಕ್ಕೆ ಕಗ್ಗತ್ತಲಾವರಿಸಿದೆ. ಸುಮಾರು 35 ವರ್ಷಗಳಿಂದ ನಾನು ಸಿದ್ಧಾರ್ಥ ಅವರನ್ನು ಬಲ್ಲೆ. ಈ ದಿನ ಆ ಸಜ್ಜನ ವ್ಯಕ್ತಿ ಇಲ್ಲ ಎಂದರೆ ನನಗೆ ನಂಬಲಸಾಧ್ಯ.ಈ ಸಾವಿನ ಕುರಿತು ಸರ್ಕಾರ ಸೂಕ್ತ ತನಿಖೆ ನಡೆಸಲಿ. ಸಿದ್ಧಾರ್ಥ ಆತ್ಮಕ್ಕೆ ಶಾಂತಿ ಸಿಗಲಿ. ಅವರ ಕುಟುಂಬಕ್ಕೆ ಹಾಗೂ ನಾಡಿನ ಅಸಂಖ್ಯಾತ ಕಾರ್ಮಿಕ ಬಂದುಗಳಿಗೆ, ಅವರ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ಸಿಗಲಿ
– ಎಚ್.ಡಿ ದೇವೇಗೌಡ, ಮಾಜಿ ಪ್ರಧಾನಿ
***
ಇನ್ನಷ್ಟು...
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.