ಶಿರಸಿ: ತಾಲ್ಲೂಕಿನ ಬಚಗಾಂವದಲ್ಲಿ ಎಂ.ಎಸ್.ಐ.ಎಲ್ ಮದ್ಯದಂಗಡಿ ಆರಂಭಿಸಿರುವುದನ್ನು ವಿರೋಧಿಸಿ ಗ್ರಾಮಸ್ಥರು, ಅಂಗಡಿ ಎದುರು ಧರಣಿ ಕುಳಿತಿದ್ದಾರೆ.
ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ, ಅಂಗಡಿ ಬಂದ್ ಮಾಡುವ ಭರವಸೆ ನೀಡದ ವಿನಾ ಧರಣಿ ಹಿಂಪಡೆಯುವ ಪ್ರಶ್ನೆಯೇ ಇಲ್ಲ ಎಂದು ಪಟ್ಟು ಹಿಡಿದಿದ್ದಾರೆ.
ಶಾಸಕ ವಿಶ್ವೇಶ್ವರ ಹೆಗಡೆ ಕಾಗೇರಿ, ಜಿಲ್ಲಾ ಪಂಚಾಯ್ತಿ ಸದಸ್ಯೆ ಉಷಾ ಹೆಗಡೆ, ತಾಲ್ಲೂಕು ಪಂಚಾಯ್ತಿ ಉಪಾಧ್ಯಕ್ಷ ಚಂದ್ರು ದೇವಾಡಿಗ, ಸ್ಥಳೀಯ ದೇವಾಲಯ ಸಮಿತಿ ಪ್ರಮುಖರು, ಮಸೀದಿ ಪ್ರಮುಖರು, ಬಹು ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿದ್ದಾರೆ.
ಮದ್ಯ ಮಾರಾಟ ಮಳಿಗೆ ಆರಂಭಿಸಲು ಸ್ಥಳೀಯ ಶಾಸಕರ ಅನುಮತಿ ಅಗತ್ಯ. ಆದರೆ, ಬಚಗಾಂವದಲ್ಲಿ ಈ ಮಳಿಗೆ ಪ್ರಾರಂಭಿಸುವ ಮೊದಲು ನನ್ನ ಗಮನಕ್ಕೆ ತಂದಿಲ್ಲ. ಮದ್ಯ ಮಾರಾಟದಿಂದ ಸರ್ಕಾರ ಆದಾಯದ ನಿರೀಕ್ಷಿಸುವುದು ಸರಿಯಲ್ಲ. ಎಲ್ಲದಕ್ಕೂ ಮೊಸಳೆ ಕಣ್ಣೀರು ಹಾಕುವ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ಅವರಿಗೆ ಬಡವರ ಬಗ್ಗೆ ನಿಜವಾದ ಕಾಳಜಿ ಇದ್ದರೆ ಮದ್ಯದಂಗಡಿ ಬಂದ್ ಮಾಡಲಿ ಎಂದು ಶಾಸಕ ವಿಶ್ವೇಶ್ವರ ಹೆಗಡೆ ಆಗ್ರಹಿಸಿದರು.