ಬೆಂಗಳೂರು: ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ವಿರುದ್ಧ ವಸತಿ ಸಚಿವ ವಿ.ಸೋಮಣ್ಣ ತೀವ್ರ ವಾಗ್ದಾಳಿ ನಡೆಸಿದ್ದು, ‘ಅವರೊಂದು ಕೊಚ್ಚೆ. ಅದರ ಮೇಲೆ ಕಲ್ಲು ಹಾಕಲು ನಾನು ತಯಾರಿಲ್ಲ’ ಎಂದು ಟೀಕಿಸಿದ್ದಾರೆ.
‘ಕುಮಾರಸ್ವಾಮಿ ಅವರು ಮಠಾಧೀಶರ ಫೋನ್ ಕದ್ದಾಲಿಕೆ ಮಾಡಿಸಿದ್ದಾರೆ. ಬಿ.ಎಸ್.ಯಡಿಯೂರಪ್ಪ ಅವರಿಗೆ ಟೋಪಿಹಾಕಿ ಹೋಗಿದ್ದಾರೆ. ಅಂತಹವರಿಂದ ಏನು ನಿರೀಕ್ಷಿಸಲು ಸಾಧ್ಯ’ ಎಂದು ಪತ್ರಿಕಾಗೋಷ್ಠಿಯಲ್ಲಿ ಪ್ರಶ್ನಿಸಿದರು.
‘ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಮಾರ್ಗದರ್ಶನದಲ್ಲಿ ಎಲ್ಲಾ ಪಕ್ಷಗಳೂ ಚುನಾವಣೆ ಎದುರಿಸಲಿ ಎಂದು ಸಲಹೆ ಮಾಡಿದ್ದೆ. ಆದರೆ ಜನತಾ ಬಜಾರ್ನಲ್ಲಿ ಬಟ್ಟೆ ಕಳ್ಳತನ ಮಾಡಿದ್ದೇನೆ ಎಂದು ನನ್ನ ವಿರುದ್ಧವೇ ಆರೋಪ ಮಾಡಿದ್ದಾರೆ’ ಎಂದರು.
‘ದೇವೇಗೌಡರ ಬಗ್ಗೆ ಯಾವತ್ತೂ ಕೆಟ್ಟದಾಗಿ ನಿಂದಿಸಿಲ್ಲ. ಅವರು ಹಿರಿಯರು. ಆದರೆ ಕುಮಾರಸ್ವಾಮಿ ಮಾತುಗಳಿಗೆ ಅಂದೇ ವಾಪಸ್ ಉತ್ತರ ಕೊಡಬಹುದಿತ್ತು. ಆದರೆ ಆ ರೀತಿ ಮಾಡಲಿಲ್ಲ’ ಎಂದು ಹೇಳಿದರು.