ಕೊಪ್ಪ: ತಾಲ್ಲೂಕಿನ ಕಮ್ಮರಡಿ ಸಮೀಪದ ತುಂಗಾ ನದಿ ತಟದಲ್ಲಿರುವ ಉಮಾಮಹೇಶ್ವರ ದೇಗುಲದಲ್ಲಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಕುಟುಂಬ ಎರಡು ದಿನಗಳ ಕಾಲ ಆಯೋಜಿಸಿದ್ದ ಹೋಮ, ಹವನ, ವಿಶೇಷ ಪೂಜಾ ಕೈಂಕರ್ಯ ಶನಿವಾರ ಮುಕ್ತಾಯಗೊಂಡಿತು.
ಎಚ್.ಡಿ. ದೇವೇಗೌಡ, ಪತ್ನಿ ಚೆನ್ನಮ್ಮ, ಲೋಕೋಪಯೋಗಿ ಸಚಿವ ಎಚ್.ಡಿ. ರೇವಣ್ಣ ಭಾಗಿಯಾಗಿದ್ದರು. ವಿಧಾನ ಪರಿಷತ್ ಸದಸ್ಯ ಎಸ್.ಎಲ್. ಭೋಜೇಗೌಡ, ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಜತೆಗಿದ್ದರು.
ಶುಕ್ರವಾರ ತಡರಾತ್ರಿವರೆಗೂ ಪೂಜಾ ಕಾರ್ಯ ನಡೆದಿತ್ತು. ನಂತರ ಮುಖ್ಯಮಂತ್ರಿ ಕುಟುಂಬ ತಲವಾನೆಯಲ್ಲಿ ವಾಸ್ತವ್ಯ ಹೂಡಿತ್ತು. ಶನಿವಾರ ಬೆಳಿಗ್ಗೆಯಿಂದ ಮಧ್ಯಾಹ್ನ 2ರವರೆಗೆ ಪೂಜೆ ನಡೆಯಿತು. ಇದರ ನೇತೃತ್ವವನ್ನು ಗಣೇಶ್ ಸೋಮಯಾಜಿ ವಹಿಸಿದ್ದರು. ಪ್ರಸಾದ ಸ್ವೀಕರಿಸಿದ ಕುಟುಂಬ, 3 ಗಂಟೆಗೆ ಬೆಂಗಳೂರಿನತ್ತ ತೆರಳಿತು.
ಎರಡು ದಿನಗಳ ಕಾಲ ಪೂಜೆ, ಸಂಕಲ್ಪ, ಹೋಮ, ಹವನ, ಪೂರ್ಣಾಹುತಿ ಕಾರ್ಯ ನಡೆದಿತ್ತು. ಗಣಪತಿ ಹೋಮ, ರುದ್ರಹೋಮ ಕೈಗೊಳ್ಳಲಾಗಿತ್ತು. ದೇವೇಗೌಡ ಅವರ ಆರೋಗ್ಯ ವೃದ್ಧಿಗೆ ವಿಶೇಷ ಪೂಜೆ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಹೆಚ್ಚುವರಿ ಎಸ್ಪಿ ಶ್ರುತಿ ನೇತೃತ್ವದಲ್ಲಿ ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿತ್ತು. ಖಾಸಗಿ ಕಾರ್ಯಕ್ರಮವಾದ್ದರಿಂದ ಸಾರ್ವಜನಿಕರಿಗೆ, ಮಾಧ್ಯಮದವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಪಕ್ಷದ ಸ್ಥಳೀಯ ಮುಖಂಡರಿಗೂ ಅವಕಾಶ ನೀಡಿರಲಿಲ್ಲ. ಮುಖ್ಯಮಂತ್ರಿ ತೆರಳಿದ ನಂತರವೂ ದೇಗುಲದ ಸಮೀಪ ಮಾಧ್ಯಮದವರನ್ನು ಹೋಗಲು ಬಿಟ್ಟಿರಲಿಲ್ಲ.