ಬೆಂಗಳೂರು: ಕೆಲವು ಅಹಿತಕರ ಘಟನೆಗಳೊಂದಿಗೆ ಎಸ್ಸೆಸ್ಸೆಲ್ಸಿ ಪರೀಕ್ಷೆ ಗುರುವಾರ ಆರಂಭವಾಯಿತು.
ಮೊದಲ ದಿನ ವಿದ್ಯಾರ್ಥಿಗಳು ಪ್ರಥಮ ಭಾಷೆ ಪತ್ರಿಕೆಯ ಪರೀಕ್ಷೆ ಬರೆದರು. ಅದರಲ್ಲಿ ಕನ್ನಡ, ಇಂಗ್ಲಿಷ್, ಸಂಸ್ಕೃತ, ತಮಿಳು, ಉರ್ದು, ಹಿಂದಿ, ತೆಲುಗು ಮತ್ತು ಮರಾಠಿ ಭಾಷಾ ವಿಷಯಗಳಿದ್ದವು.
ರಾಯಚೂರು ಮತ್ತು ತುಮಕೂರಿನಲ್ಲಿ ಪ್ರಥಮ ಭಾಷೆ ಕನ್ನಡ ಪ್ರಶ್ನೆಪತ್ರಿಕೆಯ ಒಂದು ಪುಟ ಮಧ್ಯಾಹ್ನ 12ರ ಹೊತ್ತಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿತ್ತು. ಇದರಿಂದಾಗಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ ಎಂಬ ವದಂತಿ ಹರಡಿತ್ತು.
‘ಪರೀಕ್ಷೆ ಮುಗಿಯುವ ಮುಂಚೆಯೇ ಕೇಂದ್ರದಿಂದ ಹೊರಬಂದ ವಿದ್ಯಾರ್ಥಿಗಳು ಪ್ರಶ್ನೆಪತ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿರಬಹುದು. ಈ ಕುರಿತು ಲಿಂಗಸುಗೂರು ಠಾಣೆಯಲ್ಲಿ ದೂರು ದಾಖಲಿಸಲಾಗಿದೆ. ತಪ್ಪಿತಸ್ತರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ನಿರ್ದೇಶಕಿ ವಿ.ಸುಮಂಗಲಾ ತಿಳಿಸಿದ್ದಾರೆ.
ಮೂವರು ಡಿಬಾರ್: ಬಾಗಲಕೋಟೆಯಲ್ಲಿ ನಕಲು ಮಾಡಲು ಯತ್ನಿಸಿದ ಮೂವರು ಪರೀಕ್ಷಾರ್ಥಿಗಳನ್ನು ಡಿಬಾರ್ ಮಾಡಲಾಗಿದೆ.
ವಾಟ್ಸ್ಆ್ಯಪ್ನಲ್ಲಿ ಪ್ರಶ್ನೆಪತ್ರಿಕೆ: ಸ್ಥಾನಿಕ ಜಾಗೃತ ದಳದ ಸಿಬ್ಬಂದಿ ಎಸ್.ಕಾಂತರಾಜ್ ತುಮಕೂರಿನಲ್ಲಿಕನ್ನಡ ವಿಷಯ ಪ್ರಶ್ನೆಪತ್ರಿಕೆಯ ‘ಮೊದಲ ಪುಟ’ದ ಚಿತ್ರವನ್ನು ಮೊಬೈಲ್ನಲ್ಲಿ ಕ್ಲಿಕ್ಕಿಸಿ, ವಾಟ್ಸ್ ಆ್ಯಪ್ನಲ್ಲಿ ಹರಿಬಿಟ್ಟಿದ್ದರು.
‘ಪ್ರಶ್ನೆ ಪತ್ರಿಕೆ ಬಹಿರಂಗ ಆಗಿಲ್ಲ. ಮೊದಲ ಪುಟ ಮಾತ್ರ ಹರಿದಾಡಿದೆ. ಈ ಕುರಿತು ಸಿಬ್ಬಂದಿ ಹೇಳಿಕೆ ಪಡೆಯಲಾಗಿದೆ. ಎಸ್.ಕಾಂತರಾಜ್ ತಪ್ಪೊಪ್ಪಿಗೆ ಪತ್ರ ಬರೆದುಕೊಟ್ಟಿದ್ದಾರೆ’ ಎಂದು ಮಧುಗಿರಿ ಡಿಡಿಪಿಐ ರವಿಶಂಕರ್ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.
‘ಇಲಾಖೆ ನಿಯಮಾವಳಿ ಪ್ರಕಾರ ಅವರ ವಿರುದ್ಧ ಕ್ರಮ ಜರುಗಿಸಲಾಗುತ್ತದೆ. ಈ ರೀತಿ ಅಪರಾಧ ಕೃತ್ಯಕ್ಕೆ 3 ವರ್ಷ ಜೈಲು, ₹ 5 ಲಕ್ಷ ದಂಡ ಸೇರಿದಂತೆ ಇಲಾಖೆಯ ಇನ್ನಿತರ ದಂಡನೆಗೆ ಗುರಿಪಡಿಸಬಹುದು’ ಎಂದು ಹೇಳಿದರು.