ಚಾಮರಾಜನಗರ: ಮೇ 3ರ ವರೆಗೂ ಲಾಕ್ಡೌನ್ ಜಾರಿಯಲ್ಲಿರುತ್ತದೆ. ಆ ಬಳಿಕ ಎಸ್ಸೆಸ್ಸೆಲ್ಸಿ ಪರೀಕ್ಷೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 'ಎಸ್ಸೆಸ್ಸೆಲ್ಸಿಗಿಂತ ದೊಡ್ಡ ಪರೀಕ್ಷೆ ಕೊರೊನಾ ವಿರುದ್ಧ ಹೋರಾಡುವುದು. ಯಾವ ಸಮಯದಲ್ಲಿ ಮಾಡಬೇಕು? ಮಕ್ಕಳಿಗೆ ಎಷ್ಟು ಸಮಯ ಕೊಡಬೇಕು ಎಂಬುದನ್ನು ನಂತರ ತೀರ್ಮಾನ ಮಾಡುತ್ತೇವೆ' ಎಂದರು.
'ಕೆಲವರು ಪರೀಕ್ಷೆ ಅನುಮಾನವೆಂದು ಗೊಂದಲ ಮೂಡಿಸುತ್ತಿದ್ದಾರೆ. ಮಕ್ಕಳ ಮನಸ್ಸಿನಲ್ಲಿ ಗೊಂದಲವಿಲ್ಲ. ಪೋಷಕರಲ್ಲಿ ಕೆಲವರಿಗೆ ಆತಂಕವಿದೆ. ಮೇ 3 ರ ನಂತರ ಒಂದು ನಿರ್ಧಾರ ಕೈಗೊಳ್ಳುತ್ತೇವೆ' ಎಂದರು.
ಪಾದರಾಯನಪುರ ದಾಂಧಲೆ ಆರೋಪಿಗಳನ್ನು ರಾಮನಗರ ಜೈಲಿಗೆ ಸ್ಥಳಾಂತರ ಮಾಡಿರುವುದು ಆಡಳಿತಾತ್ಮಕ ನಿರ್ಧಾರ ಎಂದು ಸುರೇಶ್ ಕುಮಾರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.