ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಖಜಾನೆ ಲೂಟಿ ಆಗಿಲ್ಲ: ಸಿದ್ದರಾಮಯ್ಯ

ಕಟೀಲ್‌ಗೆ ಬುದ್ಧಿ ಹೇಳಿ: ಆಡಳಿತ ಪಕ್ಷದ ಕಿವಿ ಹಿಂಡಿದ ವಿರೋಧ ಪಕ್ಷದ ನಾಯಕ
Last Updated 12 ಅಕ್ಟೋಬರ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು:‘ನೀವೇ (ಯಡಿಯೂರಪ್ಪ) ಮಂಡಿಸಿದ ಮಧ್ಯ ವಾರ್ಷಿಕವಿತ್ತೀಯ ವರದಿ ಪ್ರಕಾರ ರಾಜ್ಯದ ಆರ್ಥಿಕ ಸ್ಥಿತಿ ಚೆನ್ನಾಗಿಯೇ ಇದೆ. ಆದರೆ, ಖಜಾನೆ ಲೂಟಿ ಆಗಿದೆ ಎಂದು ಹೇಳುವ ನಿಮ್ಮ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ಕುಮಾರ್‌ ಕಟೀಲ್‌ ಜವಾಬ್ದಾರಿಯಿಂದ ಮಾತನಾಡಲಿ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಚಾಟಿ ಬೀಸಿದರು.

ವಿತ್ತೀಯ ಚರ್ಚೆಯ ಮೇಲೆ ಭಾಗವಹಿಸಿ ಮಾತನಾಡಿದ ಅವರು, ಯಡಿಯೂರಪ್ಪ ಆ ರೀತಿ ಮಾತನಾಡುವುದಿಲ್ಲ ಎಂಬುದು ಗೊತ್ತು. ಅದರೆ ಆರ್ಥಿಕ ವಿಷಯದ ಬಗ್ಗೆ ತಿಳಿವಳಿಕೆ ಇಲ್ಲದವರು ಬಾಲಿಶವಾಗಿ ಮಾತನಾಡಬಾರದು ಎಂದು ಕಟೀಲ್‌ಗೆ ಮಾತಿನಿಂದ ತಿವಿದರು.

ಆಗ ಮಧ್ಯ ಪ್ರವೇಶಿಸಿ ಮಾತನಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಸರ್ಕಾರದ ಖಜಾನೆ ಖಾಲಿ ಆಗಿದೆ ಎಂದು ಎಲ್ಲೂ ಹೇಳಿಲ್ಲ. ಆರ್ಥಿಕ ಸ್ಥಿತಿ ಉತ್ತ
ಮವಾಗಿದೆ. ನೆರೆ ಪರಿಸ್ಥಿತಿ ಇರುವುದರಿಂದ ಶಾಸಕರು ಅನುದಾನ ಕೇಳುವಾಗ ಯೋಚಿಸಿ ಕೇಳಬೇಕೆಂದು ಸೂಚಿಸಿದ್ದೆ ಎಂದು ಸಮಜಾಯಿಷಿ ನೀಡಿದರು.

ವಿತ್ತೀಯ ಹೊಣೆಗಾರಿಕೆ ಕಾಯ್ದೆ 2002 ರಿಂದಾಗಿ ರಾಜ್ಯದಲ್ಲಿ ವಿತ್ತಿಯ ಶಿಸ್ತು ಎಂದೂ ಹಳಿ ತಪ್ಪಿಲ್ಲ. ಆದರೆ, ದೇಶದಲ್ಲಿನ ಆರ್ಥಿಕ ಹಿಂಜರಿತದಿಂದಾಗಿ ನಮ್ಮ ರಾಜ್ಯದಲ್ಲೂ ತೆರಿಗೆ ಸಂಗ್ರಹ ಕಡಿಮೆ ಆಗಿದೆ. ಈ ಸಾಲಿನಲ್ಲಿ ಜಿಡಿಪಿಯನ್ನು ₹14 ಲಕ್ಷ ಕೋಟಿಯಿಂದ ₹16.98 ಲಕ್ಷ ಕೋಟಿಗೆ ಗುರಿ ನಿಗದಿ ಮಾಡಲಾಗಿದೆ. ತೆರಿಗೆ ಸಂಗ್ರಹ ಕಡಿಮೆ ಆಗಿರುವುದರಿಂದ ಗುರಿ ಮುಟ್ಟುವುದು ಕಷ್ಟವಾಗಬಹುದು. ಒಂದು ವೇಳೆ ಆ ರೀತಿ ಆದರೆ, ವಿತ್ತೀಯ ಕೊರತೆ ಇನ್ನಷ್ಟು ಹೆಚ್ಚಬಹುದು ಎಂದು ಸಿದ್ದರಾಮಯ್ಯ ಎಚ್ಚರಿಸಿದರು.

ಒಂದು ವೇಳೆ ವಿತ್ತೀಯ ಕೊರತೆ ಹೆಚ್ಚಾದರೆ, ರಾಜ್ಯ ಸರ್ಕಾರ ಇನ್ನಷ್ಟುಸಾಲ ಮಾಡಬೇಕಾಗಬಹುದು. ನೆರೆ ಪರಿಹಾರಕ್ಕೂ ಹೆಚ್ಚಿನ ಹಣ ಬೇಕಾಗುತ್ತದೆ. ದೇಶದ ಆರ್ಥಿಕ ಹಿಂಜರಿತದಿಂದಾಗಿ, ಜಿಡಿಪಿ ಶೇ 8 ರಿಂದ ಶೇ 5 ಕ್ಕೆ ಇಳಿದಿದೆ.ಉದ್ಯೋಗ ಸೃಷ್ಟಿಯೂ ಆಗುತ್ತಿಲ್ಲ. ಇದು ರಾಜ್ಯಗಳ ವಿತ್ತೀಯ ಸ್ಥಿತಿಯ ಮೇಲೂ ಪರಿಣಾಮ ಬೀರಿದೆ ಎಂದು ವಿವರಿಸಿದರು.

‘ಕೇಂದ್ರ ರಾಜ್ಯ ಸರ್ಕಾರಕ್ಕೆ ನೀಡುವ ಹಣದ ಪಾಲಿನಲ್ಲಿ ₹1672 ಕೋಟಿ ಕಡಿಮೆ ಮಾಡಿದೆ. ತೆರಿಗೆ ಸಂಗ್ರಹ ಕಡಿಮೆ ಆಗಿದೆ ಎಂದು ನಮ್ಮ ಪಾಲು ಕಡಿತ ಮಾಡಿರುವುದು ಸರಿಯಲ್ಲ. ದೇಶದಲ್ಲಿ ಅತ್ಯಧಿಕ ತೆರಿಗೆ ನೀಡುತ್ತಿರುವ ನಮ್ಮ ರಾಜ್ಯಕ್ಕೆ ಇದರಿಂದ ಅನ್ಯಾಯವಾಗಿದೆ. ಕೇಂದ್ರದ ಮೇಲೆ ಒತ್ತಡ ಹಾಕಿ ಆ ಹಣವನ್ನು ತರಬೇಕು’ ಎಂದು ಒತ್ತಾಯಿಸಿದರು.

***

ಆರ್ಥಿಕ ಸ್ಥಿತಿ ಇಡೀ ದೇಶದಲ್ಲೇ ಉತ್ತಮವಾಗಿದೆ. ನೆರೆ ಸಂಕಷ್ಟ, ಆರ್ಥಿಕ ಹಿಂಜರಿತ ಇದ್ದರೂ ವಿತ್ತೀಯ ಶಿಸ್ತನ್ನು ಉಳಿಸಿಕೊಂಡು ಹೋಗಬೇಕು
- ಸಿದ್ದರಾಮಯ್ಯ, ವಿರೋಧ ಪಕ್ಷದ ನಾಯಕ

***

‘ಗುರಿ ಮುಟ್ಟುತ್ತೇವೆ’

ರಾಜ್ಯದ ಸ್ವಂತ ತೆರಿಗೆ ಸಂಪನ್ಮೂಲಗಳಲ್ಲಿ ವಾಣಿಜ್ಯ ತೆರಿಗೆ, ಅಬಕಾರಿ, ನೋಂದಣಿ ಮತ್ತು ಮುದ್ರಾಂಕ ತೆರಿಗೆ ನಿರೀಕ್ಷೆಯಂತೆ ಸಂಗ್ರಹವಾಗುತ್ತಿದೆ. ಪೂರ್ಣ ವರ್ಷದ ಗುರಿಯನ್ನು ತಲುಪುತ್ತೇವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮೋಟಾರು ವಾಹನಗಳ ಮಾರಾಟವು ದೇಶದಾದ್ಯಂತ ಕಡಿಮೆ ಆಗಿದೆ. ರಾಜ್ಯದಲ್ಲೂ ಅದರ ಪರಿಣಾಮ ಬೀರಿದೆ. ಹಿಂದಿನ ವರ್ಷದ ಮೊದಲಾರ್ಧ ಅವಧಿಗೆ ಹೋಲಿಸಿದರೆ, ಇಳಿಕೆ ಕಂಡು ಬಂದಿದೆ. ಮುಂದಿನ ಆರು ತಿಂಗಳಲ್ಲಿ ಬೇಡಿಕೆ ಹೆಚ್ಚಾಗುವ ಸಾಧ್ಯತೆ ಇದ್ದು ವಾರ್ಷಿಕ ಗುರಿ ಮುಟ್ಟುತ್ತೇವೆ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

‘ಅನುದಾನ ತಡೆ ಸರಿಯಲ್ಲ’

2017–18ನೇ ಸಾಲಿನಲ್ಲಿ ಲೋಕೋಪಯೋಗಿ ಇಲಾಖೆ ಅಪೆಂಡಿಕ್ಸ್‌ ಅಡಿ ₹1,764 ಕೋಟಿ, 2018–19ರಲ್ಲಿ ₹5,690 ಕೋಟಿಯನ್ನು ವಿವಿಧ ಕಾಮಗಾರಿಗಳಿಗೆ ಬಿಡುಗಡೆ ಮಾಡಿತ್ತು. ಅದಕ್ಕೆ ಸರ್ಕಾರ ತಡೆ ನೀಡಿರುವುದು ಸರಿಯಲ್ಲ ಎಂದು ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಹೇಳಿದರು.

ಸರ್ಕಾರ ತಡೆ ನೀಡಿರುವುದರಿಂದ ಸಮಸ್ಯೆ ಆಗಿದೆ. ಕೆಲವು ಕಡೆಗಳಲ್ಲಿ ಕಾಮಗಾರಿ ಪೂರ್ಣಗೊಂಡಿದ್ದರೆ, ಇನ್ನು ಕೆಲವು ಕಡೆಗಳಲ್ಲಿ ಟೆಂಡರ್‌ ಕರೆಯಲಾಗಿದೆ. ಸರ್ಕಾರ ತನ್ನ ನಿರ್ಧಾರವನ್ನು ಪುನರ್‌ ಪರಿಶೀಲಿಸಬೇಕು. ಆರ್ಥಿಕ ವರ್ಷ ಐದು ತಿಂಗಳಲ್ಲಿ ಮುಗಿಯುತ್ತದೆ. ಅಷ್ಟರಲ್ಲಿ ಹಣ ಖರ್ಚು ಮಾಡಬೇಕಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT