ಬಾದಾಮಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ನೆರೆಯಿಂದ ಈಗ ಸಂತ್ರಸ್ತರಾದವರಿಗೆ ಪರಿಹಾರ ಕೊಟ್ಟಿಲ್ಲ. ಬದಲಿಗೆ ಹಳೆಯ ಬಾಕಿ ₹1200 ಕೋಟಿ ಬಿಡುಗಡೆ ಮಾಡಿದೆ. ಅದೂ ಕೂಡ ಆನೆ ಹೊಟ್ಟೆಗೆ ಅರೆಕಾಸಿನ ಮಜ್ಜಿಗೆ ಎಂಬಂತಾಗಿದೆ ಎಂದು ಟೀಕಿಸಿದರು.‘ಮುಖ್ಯಮಂತ್ರಿ ಯಡಿಯೂರಪ್ಪ ಕರುಣಾಜನಕ ಸ್ಥಿತಿಯಲ್ಲಿದ್ದಾರೆ. ರಾಜ್ಯದ ಬೊಕ್ಕಸ ಖಾಲಿಯಾಗಿದೆ. ಅವರಾದರೂ ಹಣ ಎಲ್ಲಿಂದ ತರ್ತಾರೆ. ನರೇಂದ್ರಮೋದಿ, ಅಮಿತ್ ಷಾ ಅವರ ಮಾತು ಕೇಳುತ್ತಿಲ್ಲ. ಭೇಟಿಗೂ ಅವಕಾಶ ನೀಡುತ್ತಿಲ್ಲ. ಹೀಗಾಗಿ ಯಡಿಯೂರಪ್ಪ ಅವರ ಪರಿಸ್ಥಿತಿ ಹುಚ್ಚರಂತಾಗಿದೆ. ಕೇಂದ್ರದ ಬಿಜೆಪಿ ನಾಯಕರಿಗೂ ಅದೇ ಬೇಕಿದೆ. ಹೀಗಾದರೆ ಯಡಿಯೂರಪ್ಪ ಅವರನ್ನು ಬೀದಿಗೆ ತಳ್ಳಿ ಬೇರೆಯವರನ್ನು ಅಧಿಕಾರಕ್ಕೆ ತರಬಹುದು ಎಂಬ ಸಂಚು ನಡೆಯುತ್ತಿದೆ‘ ಎಂದರು.