ವಿಜಯಪುರ: ಇಬ್ಬರು ಅತೃಪ್ತ ಶಾಸಕರು ಶುಕ್ರವಾರ ಸಿದ್ದರಾಮಯ್ಯ ಅವರಿಗೆ ಕರೆ ಮಾಡಿದ್ದರು. ಆದರೆ, ಸಿದ್ದರಾಮಯ್ಯ ಕರೆ ಸ್ವೀಕರಿಸಲಿಲ್ಲ ಎಂದು ಶಾಸಕ ಎಂ.ಬಿ.ಪಾಟೀಲ ಹೇಳಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ಪಕ್ಷಾಂತರ ನಿಷೇಧ ಕಾಯ್ದೆಗೆ ತಿದ್ದುಪಡಿ ಆಗಬೇಕಿದೆ. ಈ ಕಾಯ್ದೆಯ ಶೆಡ್ಯೂಲ್ 10ಕ್ಕೆ ತಿದ್ದುಪಡಿ ಆಗಬೇಕು. ಶಾಸಕರ ಅನರ್ಹತೆ ಕುರಿತು ಸ್ಪೀಕರ್ ನೀಡಿರುವ ತೀರ್ಪನ್ನು ಸುಪ್ರೀಂಕೋರ್ಟ್ ಎತ್ತಿ ಹಿಡಿಯಬೇಕು’ ಎಂದು ತಿಳಿಸಿದರು.
ಅತೃಪ್ತ ಶಾಸಕರಿಗೆ ಝೀರೋ ಟ್ರಾಫಿಕ್ ನೀಡಿಲ್ಲ. ನಾನೇ ಬಳಸಿಲ್ಲ ಎಂದ ಮೇಲೆ ಅತೃಪ್ತರಿಗೆ ಹೇಗೆ ನೀಡಲು ಸಾಧ್ಯ ಎಂದು ಪ್ರಶ್ನಿಸಿದರು.
ಬಿ.ಎಸ್.ಯಡಿಯೂರಪ್ಪ ರಾಜಕೀಯ ಜೀವನದ ಕೊನೆಯ ಹಂತದಲ್ಲಿದ್ದಾರೆ. ತಾಳ್ಮೆಯಿಂದ ಮುಂದೆ ಸಿ.ಎಂ ಆಗುವ ವಿಶ್ವಾಸ ಅವರಲ್ಲಿಲ್ಲ. ದುರಾಸೆಯಿಂದ ಅವರು ಸಿ.ಎಂ ಆಗಿದ್ದಾರೆ. ಅವರ ಪಕ್ಷದಲ್ಲಿನ ವಯಸ್ಸಿನ ಪರಿಮಿತಿಯಿಂದಾಗಿ ಈಗ ತರಾತುರಿಯಲ್ಲಿ ಸಿ.ಎಂ ಆಗಿದ್ದಾರೆ. ಇಲ್ಲದಿದ್ದರೆ ಬಿಜೆಪಿ ಮಾರ್ಗದರ್ಶನ ಸಮಿತಿಗೆ ಸೇರಿಸಬಹುದು ಎಂಬ ಆತಂಕ ಅವರಲ್ಲಿತ್ತು ಎಂದು ವ್ಯಂಗ್ಯವಾಡಿದರು.
ಈಗ ರಚನೆ ಆಗಿರುವ ಸರ್ಕಾರ ಅನೈತಿಕವಾಗಿದೆ. ಆರು ತಿಂಗಳಿನಿಂದ ಒಂದು ವರ್ಷ ಈ ಸರ್ಕಾರದ ಆಯುಷ್ಯವಿದೆ ಎಂದು ಭವಿಷ್ಯ ನುಡಿದರು.
ಆಪರೇಷನ್ ಕಮಲದಿಂದ ರಾಜ್ಯಕ್ಕೆ ಕಳಂಕ ಉಂಟಾಗಿದೆ. ನೂತನ ಸಿ.ಎಂ ಯಡಿಯೂರಪ್ಪ ಅವರೇ ಇದನ್ನು ಹುಟ್ಟು ಹಾಕಿದ್ದು. ಇದರಿಂದಾಗಿ ರಾಜ್ಯದ ಘನತೆ ಮಣ್ಣು ಪಾಲಾಗಿದೆ. ಆಪರೇಷನ್ ಕಮಲ ಹೇಯ ಕೃತ್ಯ. ಪಕ್ಷಾಂತರಕ್ಕೆ ಅಂತ್ಯವಿಲ್ಲ. ಇದು ಪ್ರಾರಂಭ. ಇದು ಬೇರೆ ರಾಜ್ಯದಲ್ಲೂ ನಡೆಯುತ್ತದೆ. ಆ ಮೇಲೆ ಇದಕ್ಕೆ ಕರ್ನಾಟಕ ಫಾರ್ಮುಲಾ ಅಂತಾರೆ ಎಂದು ಕುಟುಕಿದರು.