ಬೆಂಗಳೂರು: ‘ಕೊರೊನಾ’ ಸೋಂಕು ಹರಡುವಿಕೆ ತಡೆಗಟ್ಟಲು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದ ‘ಜನತಾ ಕರ್ಫ್ಯೂ’ನಿಂದಾಗಿ ಭಾನುವಾರ ಇಡೀ ರಾಜ್ಯದಲ್ಲಿ ಚಟುವಟಿಕೆ ಸ್ತಬ್ಧವಾಯಿತು. ಜನರು ಸ್ವಯಂಪ್ರೇರಿತರಾಗಿ ಮನೆಯಲ್ಲೇ ಉಳಿದು ಬೆಂಬಲ ವ್ಯಕ್ತಪಡಿಸಿದರು.
ಸಾರಿಗೆ ವ್ಯವಸ್ಥೆ, ವ್ಯಾಪಾರ– ವಹಿವಾಟು ಸೇರಿ ಎಲ್ಲ ರೀತಿಯ ಸೇವೆಗಳು ಸಂಪೂರ್ಣ ಸ್ಥಗಿತಗೊಂಡವು.ದೇವಾಲಯ, ಮಸೀದಿ, ಚರ್ಚ್ಗಳನ್ನೂ ಮುಚ್ಚಲಾಗಿತ್ತು.ಬಸ್, ರೈಲು ಹಾಗೂ ಮೆಟ್ರೊ ರೈಲು ಓಡಾಟ ಸ್ಥಗಿತವಾಗಿತ್ತು.
ಊರುಗಳಿಗೆ ಹೋಗಲು ಮೆಜೆಸ್ಟಿಕ್ಗೆ ಬಂದಿದ್ದ 200ಕ್ಕೂ ಹೆಚ್ಚು ಪ್ರಯಾಣಿಕರು ಬಸ್,ರೈಲು ಸೇವೆ ಇಲ್ಲದೇ ಸಮಸ್ಯೆ ಎದುರಿಸಿದರು.
ಆತಂಕ ಸೃಷ್ಟಿಸಿದ ಯುವಕ–ಮಹಿಳೆ:ದುಬೈನಿಂದ ಬೆಂಗಳೂರಿಗೆ ವಿಮಾನದಲ್ಲಿ ಬಂದಿದ್ದ ರಾಜಸ್ಥಾನದ ಯುವಕ ಹಾಗೂ ದೆಹಲಿಯ ಮಹಿಳೆ, ನಗರದ ಮೆಜೆಸ್ಟಿಕ್ನ ಬಸ್ ಹಾಗೂ ರೈಲು ನಿಲ್ದಾಣಗಳಲ್ಲಿ ಓಡಾಡಿ ಆತಂಕ ಸೃಷ್ಟಿಸಿದರು. ನಿಲ್ದಾಣದಲ್ಲಿ ಈ ಇಬ್ಬರತಪಾಸಣೆ ನಡೆಸಿದ್ದ ಆರೋಗ್ಯಾಧಿಕಾರಿಗಳು, ಕೈಗೆ ಮುದ್ರೆ ಹಾಕಿದ್ದರು. ಮೆಜೆಸ್ಟಿಕ್ನಲ್ಲಿ ಆ ಮುದ್ರೆ ನೋಡಿದ ಜನರೂ ಆತಂಕಗೊಂಡರು. ರೈಲ್ವೆ ಪೊಲೀಸರೇ ಇಬ್ಬರನ್ನು ಆಸ್ಪತ್ರೆಗೆ ಕಳುಹಿಸಿದರು.