ತುಮಕೂರು: ನಗರದ ಶಿವಕುಮಾರ ಸ್ವಾಮೀಜಿ ವೃತ್ತದಲ್ಲಿ ಶನಿವಾರ ಮಧ್ಯಾಹ್ನ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ನಡೆಸಿದರು. ಲಾಠಿ ಹೊಡೆತಕ್ಕೆ ವಿದ್ಯಾರ್ಥಿಗಳು ದಿಕ್ಕಾಪಾಲಾದರು.
ಚಂದನ್ ಎಂಬ ವಿದ್ಯಾರ್ಥಿ ಕೆಎಸ್ ಆರ್ ಟಿಸಿ ಬಸ್ ಕೆಳಗಡೆ ಅವಿತು ಕುಳಿತುಕೊಂಡಾಗ ಪೊಲೀಸರು ಪ್ರಯಾಸಪಟ್ಟು ಮನವೊಲಿಸಿ ಹೊರಗಡೆ ಕರೆ ತಂದರು.
ವಿದ್ಯಾರ್ಥಿಗಳಿಗೆ ವಿತರಿಸುವ ಬಸ್ ಪಾಸ್ ಕುರಿತ ಗೊಂದಲ ಹೋಗಲಾಡಿಸಿ ಸಮರ್ಪಕವಾಗಿ ಎಲ್ಲ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಿಸಲು ಒತ್ತಾಯಿಸಿ ಎಬಿವಿಪಿ ನೇತೃತ್ವದಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು.
ಪ್ರತಿಭಟನೆಯಿಂದ ಬೆಂಗಳೂರು ಕಡೆಯಿಂದ ಬರುತ್ತಿದ್ದ ಬಸ್ಸುಗಳು ಶಿವಕುಮಾರಸ್ವಾಮೀಜಿ ಸರ್ಕಲ್ನಲ್ಲಿಯೇ ನಿಂತ ಪರಿಣಾಮ ಸಂಚಾರ ಅಸ್ತವ್ಯಸ್ತಗೊಂಡಿತು. ವಿದ್ಯಾರ್ಥಿಗಳನ್ನು ಚೆದುರಿಸಲು ಪೊಲೀಸರು ಪರದಾಡಿದರು. ಮುಖಂಡರನ್ನು ಎತ್ತಿ ಗುಂಪಿನಿಂದ ಹೊರಗೆ ಕಳಿಸುತ್ತಿದ್ದುದು ಕಂಡು ಬಂತು.