ಬೆಂಗಳೂರು: ಮಂಡ್ಯ ಲೋಕಸಭಾ ಕ್ಷೇತ್ರವನ್ನು ಗೆಲ್ಲಲು ಕಾರ್ಯತಂತ್ರ ರೂಪಿಸುತ್ತಿರುವ ಜೆಡಿಎಸ್, ಇಲ್ಲಿ ಕಣಕ್ಕಿಳಿಯಲು ನಿರ್ಧರಿಸಿರುವ ಸುಮಲತಾ ಅಂಬರೀಷ್ ಅವರ ಬೆಂಬಲಕ್ಕೆ ನಿಂತಿರುವ ಜಿಲ್ಲಾ ಕೈ ಮುಖಂಡರಿಗೆ ಕಡಿವಾಣ ಹಾಕಲು ಮುಂದಾಗಿದೆ.
ಮೈತ್ರಿ ಸೂತ್ರದಂತೆ ಜೆಡಿಎಸ್ ಅಭ್ಯರ್ಥಿ ಪರ ಕೆಲಸ ಮಾಡುವಂತೆ ಸ್ಥಳೀಯ ಕಾಂಗ್ರೆಸ್ ನಾಯಕರಿಗೆ ಸ್ಪಷ್ಟ ಸಂದೇಶ ಕೊಡುವ ಪ್ರಯತ್ನ ನಡೆಸುತ್ತಿರುವ ಆ ಪಕ್ಷದ ನಾಯಕರು, ಕಾಂಗ್ರೆಸ್ ಹೈಕಮಾಂಡ್ ಮೂಲಕ ಜಿಲ್ಲಾ ಕೈ ನಾಯಕರಿಗೆ ಮೂಗುದಾರ ತೊಡಿಸಲು ತೀರ್ಮಾನಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮಂಡ್ಯ ಜಿಲ್ಲಾ ರಾಜಕೀಯದಲ್ಲಿ ಮಧ್ಯಪ್ರವೇಶಿಸಿರುವ ಶಿವಕುಮಾರ್, ಮಂಡ್ಯ ಜಿಲ್ಲಾ ಮುಖಂಡರು, ಚುನಾವಣೆಯಲ್ಲಿ ಪರಾಜಿತ, ಮಾಜಿ ಶಾಸಕರು, ಪದಾಧಿಕಾರಿಗಳ ಸಭೆಯನ್ನು ಭಾನುವಾರ ಕರೆದಿದ್ದಾರೆ. ಸಂಜೆ 5 ಗಂಟೆಗೆ ಕ್ರೆಸೆಂಟ್ ರಸ್ತೆಯಲ್ಲಿರುವ ಸಚಿವರ ಸರ್ಕಾರಿ ಮನೆಯಲ್ಲಿ ಈ ಸಭೆ ನಡೆಯಲಿದೆ.
ಸುಮಲತಾ ಸ್ಪರ್ಧೆಗಿಳಿಯಲು ನಿರ್ಧರಿಸಿರುವುದು ಜೆಡಿಎಸ್ ನಾಯಕರನ್ನು ಕಂಗಡಿಸಿದೆ ಎನ್ನಲಾಗಿದೆ. ಸುಮಲತಾ ಅವರ ಬೆನ್ನ ಹಿಂದೆ ಪರೋಕ್ಷವಾಗಿ ಮಂಡ್ಯ ಕೈ ಮುಖಂಡರಿದ್ದಾರೆ ಎಂಬ ಅನುಮಾನವೂ ಇದೆ.