ರಾಮನಗರ: ಜಿಲ್ಲೆಯಲ್ಲಿ ಬಿಸಿಲ ಝಳ ವಿಪರೀತವಾಗಿದ್ದು, ಮಾವು ಬೆಳೆ ರಕ್ಷಣೆಗೆ ರೈತರು ಟ್ಯಾಂಕರ್ ನೀರಿನ ಮೊರೆ ಹೋಗುತ್ತಿದ್ದಾರೆ.
ರಾಮನಗರವು ರಾಜ್ಯದಲ್ಲಿ ಮಾವು ಬೆಳೆಯುವ ಜಿಲ್ಲೆಗಳಲ್ಲಿ ಎರಡನೇ ಸ್ಥಾನದಲ್ಲಿ ಇದೆ. ಇಲ್ಲಿನ 23 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಈ ಹಣ್ಣನ್ನು ಬೆಳೆಯಲಾಗುತ್ತಿದೆ. ರಾಜ್ಯದಲ್ಲಿಯೇ ಮೊದಲು ಮಾರುಕಟ್ಟೆಗೆ ಬರುವುದು ರಾಮನಗರದ ಮಾವು. ಇದಕ್ಕೆ ಇಲ್ಲಿನ ಅಧಿಕ ಉಷ್ಣಾಂಶ ಕಾರಣ.
ಜಿಲ್ಲೆಯಲ್ಲಿ ಈ ವರ್ಷ ಮಳೆ ಕೈಕೊಟ್ಟಿದ್ದು, ಮಾವಿನ ತೋಟಗಳಿಗೆ ನೀರಿನ ಕೊರತೆ ಎದುರಾಗಿದೆ. ಸೇಂದೂರ, ರಸಪುರಿ ಕಾಯಿಗಳು ಬಲಿಯುತ್ತಿದ್ದು, ಮಾರುಕಟ್ಟೆಗೆ ಬರಲಾರಂಭಿಸಿವೆ. ಬದಾಮಿ ಮರಗಳಲ್ಲಿ ಇನ್ನೂ ಮಿಡಿ ಇದೆ. ಬಿಸಿಲ ಝಳಕ್ಕೆ ಕಾಯಿಗಳು ಉದುರುತ್ತಿರುವುದು ರೈತರನ್ನು ಆತಂಕಕ್ಕೀಡು ಮಾಡಿದೆ.
ಕೊಳವೆ ಬಾವಿ ಸಂಪರ್ಕ ಇರುವಲ್ಲಿಯೂ ಅಂತರ್ಜಲ ಕುಸಿಯುತ್ತಿದ್ದು, ನೀರಿನ ಲಭ್ಯತೆ ಕಡಿಮೆಯಾಗಿದೆ.