ರಾಯಚೂರು: ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ನೀರಿನ ಕೊರತೆಯಿಂದ ಜನರು ಬವಣೆ ಅನುಭವಿಸುತ್ತಿರುವುದಕ್ಕೆ ಸ್ಪಂದಿಸಿರುವ ಚಿತ್ರನಟ ಯಶ್ ಅವರು ’ಯಶೋಮಾರ್ಗ’ ಸಂಸ್ಥೆಯ ಮೂಲಕ ರಾಯಚೂರು ತಾಲ್ಲೂಕಿನ ವಿವಿಧ ಗ್ರಾಮಗಳಿಗೆ ಬುಧವಾರದಿಂದ ನೀರು ಪೂರೈಕೆ ಆರಂಭಿಸಿದ್ದಾರೆ.
ರಾಯಚೂರು ತಾಲ್ಲೂಕಿನ ಬಿಜನಗೇರಾ, ಬೋಳಮಾನದೊಡ್ಡಿ, ಬಾಯಿದೊಡ್ಡಿ, ಗೌಶ್ ನಗರದಲ್ಲಿ ಕುಡಿಯುವ ನೀರು ಪೂರೈಕೆ ಮಾಡಲಾಗುತ್ತಿದೆ. ಹತ್ತಿರದಲ್ಲಿ ಲಭ್ಯವಿರುವ ಖಾಸಗಿ ಕೊಳವೆ ಬಾವಿಗಳಿಂದ ಟ್ಯಾಂಕರ್ ಗೆ ನೀರನ್ನು ತುಂಬಿಸಿಕೊಂಡು ಜನರಿಗೆ ಉಚಿತವಾಗಿ ಕೊಡಲಾಗುತ್ತಿದೆ.
ಮೊದಲ ಹಂತವಾಗಿ 10 ದಿನಗಳವರೆಗೆ ಪ್ರತಿಗ್ರಾಮಕ್ಕೆ ಮೂರು ಟ್ರಿಪ್ ನಂತೆ ನೀರು ಕೊಡಲು ಯಶ್ ಹಾಗೂ ಅವರ ಅಭಿಮಾನಿಗಳು ಮುಂದಾಗಿದ್ದಾರೆ.
ಸದ್ಯ ಎರಡು ಟ್ಯಾಕ್ಟರ್ ಗಳ ಮೂಲಕ ನೀರು ಸರಬರಾಜು ಆರಂಭಿಸಿದ್ದಾರೆ. ಮುಂದಿನ ದಿನಗಳಲ್ಲಿ ಮಳೆ ಬಾರದೆ ಹೋದರೆ ಇನ್ನೂ ಹೆಚ್ಚು ಸಂಖ್ಯೆಯ ಟ್ಯಾಂಕರ್ ಬಳಸಿಕೊಂಡು ನೀರಿನ ಸಮಸ್ಯೆಯಿರುವ ಗ್ರಾಮಗಳಿಗೆ ನೀರಿನ ಸೌಲಭ್ಯ ಕಲ್ಪಿಸಲು ಯೋಜಿಸಿದ್ದಾರೆ.
ಯಶೋಮಾರ್ಗದಿಂದ ನೀರು ಪೂರೈಸುತ್ತಿರುವುದಕ್ಕೆ ಗ್ರಾಮೀಣ ಭಾಗದ ಜನರು ಸಂತಸ ವ್ಯಕ್ತಪಡಿಸುತ್ತಿದ್ದಾರೆ.