ಬೆಂಗಳೂರು: ‘ಪ್ರಾಥಮಿಕ ಮತ್ತು ಪ್ರೌಢಶಾಲಾಶಿಕ್ಷಕರ ಕಡ್ಡಾಯ ವರ್ಗಾವಣೆಯನ್ನು ಮುಖ್ಯಮಂತ್ರಿ ಸೂಚನೆ ಮೇರೆಗೆ ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಆದರೆ ವರ್ಗಾವಣೆ ಪ್ರಕ್ರಿಯೆ ಯಾವ ಕಾರಣಕ್ಕೂ ಸ್ಥಗಿತಗೊಳ್ಳುವುದಿಲ್ಲ’ ಎಂದು ಪ್ರಾಥಮಿಕ ಶಿಕ್ಷಣ ಇಲಾಖೆ ಆಯುಕ್ತ ಡಾ.ಕೆ.ಜಿ.ಜಗದೀಶ್ ಸ್ಪಷ್ಟಪಡಿಸಿದ್ದಾರೆ.
‘ವೇಳಾಪಟ್ಟಿಯಂತೆ ಮಂಗಳವಾರ ಪ್ರಾಥಮಿಕ ಶಾಲಾ ಶಿಕ್ಷಕರ ಕಡ್ಡಾಯ ವರ್ಗಾವಣೆಗೆ ಕೌನ್ಸೆಲಿಂಗ್ ನಡೆಯಬೇಕಿತ್ತು. ಕೆಲವು ವಿಷಯಗಳಲ್ಲಿ ಮುಖ್ಯಮಂತ್ರಿ ಮಾಹಿತಿ ಕೇಳಿದ್ದಾರೆ. ಅದಕ್ಕಾಗಿ ಕೌನ್ಸೆಲಿಂಗ್ ಅನ್ನು ತಾತ್ಕಾಲಿಕವಾಗಿ ತಡೆಹಿಡಿಯಲಾಗಿದೆ. ಮಂಗಳ ವಾರ ಶಿಕ್ಷಣ ಇಲಾಖೆ ಅಧಿಕಾರಿಗಳ ಸಭೆ ನಡೆಯಲಿದ್ದು, ಕೆಲವು ಕಾನೂನು ತೊಡಕುಗಳ ಬಗ್ಗೆಯೂ ಚರ್ಚೆ ನಡೆಯಲಿದೆ. ಮುಖ್ಯಮಂತ್ರಿ ಸೂಚನೆಯನ್ನು ಆಧರಿಸಿ ಕೌನ್ಸೆಲಿಂಗ್ ದಿನಾಂಕ ಪ್ರಕಟಿಸಲಾಗುವುದು’ ಎಂದರು.
ವರ್ಗಾವಣೆ ಸ್ಥಗಿತಗೊಳಿಸಿದರೆ ಉಗ್ರ ಹೋರಾಟ ನಿಶ್ಚಿತ ಎಂದು ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಎನ್.ಚಂದ್ರಶೇಖರ್ ಎಚ್ಚರಿಸಿದ್ದಾರೆ.
‘ಜಿಲ್ಲಾ, ವಿಷಯವಾರು ಮಿತಿ ಇರಲಿ’
ಈಗಾಗಲೇ ಕೋರಿಕೆ ವರ್ಗಾವಣೆ ಕೊನೆಗೊಂಡಿದ್ದು, ಅವಕಾಶ ದೊರಕದ ಹಲವಾರು ಶಿಕ್ಷಕರು ವರ್ಗಾವಣೆ ನೀತಿಯಲ್ಲಿನ ಲೋಪದೋಷಗಳನ್ನು ಬೇಸರದಿಂದಲೇ ಎತ್ತಿ ತೋರಿಸುತ್ತಿದ್ದಾರೆ. ಕಳೆದ ಬಾರಿ ಇದ್ದಂತಹ ಜಿಲ್ಲಾವಾರು, ವಿಷಯವಾರು ವರ್ಗಾವಣೆ ಕ್ರಮವೇ ಉತ್ತಮವಿತ್ತು ಎಂದು ಅಭಿಪ್ರಾಯಪಟ್ಟಿದ್ದಾರೆ.
‘ಕಳೆದ ಬಾರಿ ಇದ್ದಂತೆ ವೈದ್ಯಕೀಯ ನೆಲೆಯಲ್ಲಿ ವರ್ಗಾವಣೆಯನ್ನು ಪ್ರತ್ಯೇಕವಾಗಿ ಇಟ್ಟು, ಉಳಿದಂತೆ ವಿಷಯವಾರು, ಮಹಿಳೆ, ಪುರುಷರಿಗೆ ಕನಿಷ್ಠತಲಾಶೇ 2ರಂತೆ ವರ್ಗಾವಣೆ ಮಿತಿ ಹಾಕಿದ್ದರೆ ಸಮಸ್ಯೆಯೇ ಇರುತ್ತಿರಲಿಲ್ಲ’ ಎಂದಿದ್ದಾರೆ.
*3 ವರ್ಷಗಳಿಂದ ಬಾಕಿ ಉಳಿದಿದ್ದ ವರ್ಗಾವಣೆ ಪ್ರಕ್ರಿಯೆಯನ್ನು ಈ ತಿಂಗಳೊಳಗೆ ಮುಗಿಸಲೇಬೇಕು. ಖಾಲಿ ಹುದ್ದೆ ತೋರಿಸುವಂತೆ ಅಧಿಕಾರಿಗಳನ್ನು ಕೋರಲಾಗಿದೆ.