ಬೆಂಗಳೂರು: ‘ಬಜೆಟ್ ಅಧಿವೇಶನದಲ್ಲಿ ಅನುಮೋದನೆಗೊಂಡಿರುವ ಶಿಕ್ಷಕರ ವರ್ಗಾವಣೆ ನಿಯಂತ್ರಣ ಕಾಯ್ದೆಗೆ ತುರ್ತಾಗಿ ನಿಯಮಗಳನ್ನು ರೂಪಿಸಿ, ವರ್ಗಾವಣೆ ವೇಳಾಪಟ್ಟಿ ಪ್ರಕಟಣೆಗೆ ಪೂರ್ವಭಾವಿ ತಯಾರಿ ನಡೆಸಬೇಕು’ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.
ಶುಕ್ರವಾರ ಇಲ್ಲಿ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದ ಅವರು, ‘ಸಂಸದೀಯ ವ್ಯವಹಾರಗಳ ಇಲಾಖೆಯ ಕಾನೂನಾತ್ಮಕ ಅಭಿಪ್ರಾಯದೊಂದಿಗೆ ಕೂಡಲೇ ನಿಯಮಗಳನ್ನು ಅಂತಿಮಗೊಳಿಸಿ ವರ್ಗಾವಣಾ ಪ್ರಕ್ರಿಯೆಗೆ ಚಾಲನೆ ನೀಡಲು ಅಗತ್ಯ ಕ್ರಮಗಳನ್ನು ಕೈಗೊಳ್ಳಬೇಕು’ ಎಂದರು.
‘ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಕಾಯುತ್ತಿರುವ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ರೀತಿಯಲ್ಲಿ ಶಿಕ್ಷಣ ಇಲಾಖೆಯ ಯೂಟ್ಯೂಬ್ ಚಾನೆಲ್ನಲ್ಲಿ ಪುನರ್ಮನನ ತರಗತಿಗಳನ್ನು ಬಿತ್ತರಿಸುವ ಚಿಂತನೆ ನಡೆಸಿ’ ಎಂದೂ ಸಲಹೆ ನೀಡಿದರು.
ಆನ್ಲೈನ್ ತರಗತಿ: ‘ಹಲವು ಶಾಲೆಗಳು ಆನ್ಲೈನ್ ಮೂಲಕ ತರಗತಿಗಳನ್ನು ನಡೆಸುತ್ತಿರುವ ಕುರಿತಂತೆ ಕೆಲವು ವರದಿಗಳು ಬಂದಿವೆ. ಬೇಸಿಗೆ ರಜೆಯ ಅವಧಿಯಲ್ಲಿ ವಿದ್ಯಾರ್ಥಿಗಳ ಆನಂದವನ್ನು ಕಸಿದುಕೊಳ್ಳದಿರುವ ಹಾಗೂ ಪೋಷಕರಿಗೆ ಯಾವುದೇ ಆರ್ಥಿಕ ಹೊರೆಯಾಗದ ರೀತಿಯಲ್ಲಿ ಶಾಲೆಗಳು ಆನ್ಲೈನ್ ತರಗತಿಗಳನ್ನು ನಡೆಸಲು ಇಚ್ಛಿಸಿದಲ್ಲಿ ಅನುಮತಿ ನೀಡಲು ಪರಿಶೀಲಿಸಬಹುದು’ ಎಂದು ಸಚಿವರು ನಿರ್ದೇಶನ ನೀಡಿದರು.
ಪಠ್ಯಕ್ರಮ ಬದಲಾವಣೆ ಸಾಧ್ಯತೆ
‘ಮುಂದಿನ ಶೈಕ್ಷಣಿಕ ಸಾಲಿನಿಂದ ಪಠ್ಯಕ್ರಮದಲ್ಲಿ ಬದಲಾವಣೆಯಾಗುವ ಸಾಧ್ಯತೆ ಇದೆ. ಹೀಗಾಗಿ ಎನ್ಸಿಇಆರ್ಟಿ ನಿಗದಿಪಡಿಸಿದ ಪಠ್ಯಕ್ರಮದ ಆಶಯಗಳಿಗೆ ಅನುಗುಣವಾಗಿ ಪಠ್ಯಕ್ರಮ ಪರಿಷ್ಕರಣೆಯ ಅವಶ್ಯಕತೆ ಇದ್ದು, ಇದಕ್ಕಾಗಿ ತಜ್ಞರೊಂದಿಗೆ ಸಭೆ ನಡೆಸಬೇಕು’ ಎಂದರು.