ಬೆಂಗಳೂರು: ರಾಜ್ಯದ ಉತ್ತರ ಒಳನಾಡಿನಲ್ಲಿ ಇದೇ 21 ಮತ್ತು 22ರಂದು ಗರಿಷ್ಠ 43 ಡಿಗ್ರಿ ಸೆಲ್ಸಿಯಸ್ವರೆಗೆ ತಾಪಮಾನ ಏರುವ ಸಾಧ್ಯತೆ ಇದೆ. ಈ ಎರಡೂ ದಿನಗಳ ಕಾಲ ಬೆಳಿಗ್ಗೆ 11:30ರಿಂದ ಮಧ್ಯಾಹ್ನ 3:30ರವರೆಗೆ ರೈತರು ಹಾಗೂ ಸಾರ್ವಜನಿಕರು ಬಿಸಿಲಿಗೆ ಮೈಯೊಡ್ಡದಂತೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಹವಾಮಾನ ವೈಪರೀತ್ಯದಿಂದ ರಾಜ್ಯದ ಕೆಲವೆಡೆ ಒಂದು ವಾರದಿಂದ ಭಾರಿ ಮಳೆಯಾಗಿದ್ದು, ತಾಪಮಾನ ಏರಿಕೆಗೂ ಇದೇ ಕಾರಣ ಎನ್ನಲಾಗಿದೆ. ಕಲಬುರ್ಗಿಯಲ್ಲಿ ಬುಧವಾರ 41.3 ಡಿಗ್ರಿ ಸೆಲ್ಸಿಯಸ್ ಗರಿಷ್ಠ ತಾಪಮಾನ ದಾಖಲಾಗಿದೆ. ರಾಯಚೂರು 39, ಬೀದರ್, ವಿಜಯಪುರದಲ್ಲಿ ತಲಾ 38 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ.
ರಾಜ್ಯದ ಕರಾವಳಿ ಭಾಗ ಹಾಗೂ ದಕ್ಷಿಣ ಒಳನಾಡಿನಲ್ಲಿ ಮುಂದಿನ 48 ಗಂಟೆಗಳವರೆಗೆ ಗುಡುಗು, ಸಿಡಿಲು ಹೆಚ್ಚಾಗಿರಲಿದೆ. ಉತ್ತರ ಒಳನಾಡು ಹಾಗೂ ಉಳಿದ ಭಾಗಗಳಲ್ಲಿ ಚದುರಿದಂತೆ ಮಳೆಯಾಗಲಿದೆ.
ಬೆಳಗಾವಿ ಜಿಲ್ಲೆಯ ಬೈಲಹೊಂಗಲ ಹಾಗೂ ಬೆಳವಾಡಿಯಲ್ಲಿ ತಲಾ 8 ಸೆಂ.ಮೀ ಗರಿಷ್ಠ ಮಳೆಯಾಗಿದೆ. ಅಥಣಿ, ಹಗರಿಬೊಮ್ಮನಹಳ್ಳಿ, ರಾಣಿಬೆನ್ನೂರು 3, ದಾವಣಗೆರೆ, ಭರಮಸಾಗರ, ಉಚ್ಚಂಗಿದುರ್ಗ 2, ಸುಬ್ರಹ್ಮಣ್ಯ, ದಾವಣಗೆರೆ, ಕಿತ್ತೂರು, ಮಾಲೂರು, ಮಡಿಕೇರಿ, ಆಗುಂಬೆ ಹಾಗೂ ಹರಿಹರದಲ್ಲಿ ತಲಾ 1 ಸೆಂ.ಮೀ ಮಳೆಯಾಗಿದೆ.