ಮಡಿಕೇರಿ: ಭಾಗಮಂಡಲ–ತಲಕಾವೇರಿ ದೇವಸ್ಥಾನ ವ್ಯವಸ್ಥಾಪನಾ ಮಂಡಳಿಯು ಕಾವೇರಿ ನದಿ ಉಗಮ ಸ್ಥಳವಾದ ತಲಕಾವೇರಿಯಲ್ಲಿ ದೋಷ ನಿವಾರಣೆಯ ನೆಪದಲ್ಲಿ ಕೆಲವು ನಿರ್ಬಂಧ ಹೇರಲಾಗಿದ್ದು ಭಕ್ತರ ಆಕ್ರೋಶಕ್ಕೆ ಕಾರಣವಾಗಿದೆ.
ತಲಕಾವೇರಿ ಕ್ಷೇತ್ರದ ಅಗಸ್ತ್ಯಲಿಂಗವನ್ನು ಸಮುದ್ರದಲ್ಲಿ ವಿಸರ್ಜಿಸಲು ಮಂಡಳಿಯು ನಿರ್ಧರಿಸಿರುವ ಕ್ರಮಕ್ಕೂ ಭಕ್ತರು ಹಾಗೂ ಸ್ಥಳೀಯರಿಂದ ಅಸಮಾಧಾನ ವ್ಯಕ್ತವಾಗಿದೆ.
‘ತಲಕಾವೇರಿ ಕ್ಷೇತ್ರವು ಭಕ್ತರ ಪಾಲಿಗೆ ಪವಿತ್ರ ಕ್ಷೇತ್ರ. ಅಗಸ್ತ್ಯ ಮಹರ್ಷಿ ಪ್ರತಿಷ್ಠಾಪಿಸಿದ್ದ ಭೂಗರ್ಭದಲ್ಲಿದ್ದ ಲಿಂಗವನ್ನು ಹೊರ ತೆಗೆಯಲಾಗಿದೆ. ಭಕ್ತರ ಅಭಿಪ್ರಾಯ ಪಡೆಯದೆ ಬೃಹತ್ ಲಿಂಗವನ್ನುದೇವಾಲಯ ಸಮಿತಿಯವರು ಸಮುದ್ರದಲ್ಲಿ ವಿಸರ್ಜಿಸಲು ಮುಂದಾಗಿರುವುದು ಆಘಾತ ಉಂಟುಮಾಡಿದೆ’ ಎಂದುಭಾಗಮಂಡಲದ ಗ್ರಾಮಸ್ಥ ಕುದುಕುಳಿ ಭರತ್ ಪತ್ರಿಕಾಗೋಷ್ಠಿಯಲ್ಲಿ ಶುಕ್ರವಾರ ನೋವು ತೋಡಿಕೊಂಡರು.
‘ವ್ಯವಸ್ಥಾಪನಾ ಮಂಡಳಿಯು ಕೇರಳದ ತಂತ್ರಿಗಳ ಮೂಲಕ ಅಷ್ಟಮಂಗಲ ಪ್ರಶ್ನೆ ಆಯೋಜಿಸಿ ಗೊಂದಲ ಸೃಷ್ಟಿಸುತ್ತಿದೆ’ ಎಂದೂ ಆಪಾದಿಸಿದರು.
‘ತಲಕಾವೇರಿ ದೇವಾಲಯದ ಜೀರ್ಣೋದ್ಧಾರಹಾಗೂ ಧಾರ್ಮಿಕ ಕಾರ್ಯಗಳು 2004ರಲ್ಲಿಯೇ ನಡೆದಿವೆ. ಆಗ ಕಂಡುಬಂದಿದ್ದ ದೋಷಗಳನ್ನು ನಿವಾರಣೆ ಮಾಡಲಾಗಿದೆ. ಆದರೆ, ನೂತನ ಮಂಡಳಿ ಮತ್ತೆ ಅಷ್ಟಮಂಗಳ ಪ್ರಶ್ನೆ ಆಯೋಜನೆ ಮಾಡುತ್ತಿರುವ ಕ್ರಮ ಸರಿಯಲ್ಲ. ಇದರ ವಿರುದ್ಧ ಹೋರಾಟ ರೂಪಿಸಲಾಗುವುದು’ ಎಂದು ಎಚ್ಚರಿಸಿದರು.
ಪವಿತ್ರ ಸ್ನಾನಕ್ಕೂ ನಿರ್ಬಂಧ
‘ತಲಕಾವೇರಿ ಕ್ಷೇತ್ರದ ಕೊಳದಲ್ಲಿ ಸ್ನಾನ ಮಾಡುವುದಕ್ಕೆ ಹಾಗೂ ಬ್ರಹ್ಮಕುಂಡಿಕೆಗೆ ಕುಂಕುಮಾರ್ಚನೆಗೂ ನಿರ್ಬಂಧ ಹೇರಲಾಗಿದೆ. ಶತಮಾನದಿಂದ ನಡೆದುಕೊಂಡು ಬಂದಿರುವ ಸಂಪ್ರದಾಯ ಬದಲಾವಣೆ ಮಾಡುವ ಹಕ್ಕು ಮಂಡಳಿಗಿಲ್ಲ. ಆದರೆ, ಸಮಿತಿಯು ಬ್ರಹ್ಮಕುಂಡಿಕೆ ಸುತ್ತ ಬೇಲಿ ಹಾಕಿ ದೈವಿಕ ಭಾವನೆಗಳಿಗೆ ಧಕ್ಕೆ ಮಾಡುತ್ತಿದೆ’ ಎಂದು ಭರತ್ ಆರೋಪಿಸಿದರು.