ಬೆಂಗಳೂರು: ರಾಜ್ಯದ ಪಶ್ಚಿಮ ಕರಾವಳಿಯ ಸುಮಾರು 321 ಕಿ.ಮೀ ವಿಸ್ತಾರವಿರುವ ಕಡಲ ತೀರದಲ್ಲಿ ಕೇಂದ್ರ ಸರ್ಕಾರ ಹಾಗೂ ವಿಶ್ವಬ್ಯಾಂಕ್ ನೆರವಿನಿಂದ ಚಂಡಮಾರುತ ಅಪಾಯ ಉಪಶಮನ ಯೋಜನೆ ಅನುಷ್ಠಾನ ಮಾಡಲಾಗುತ್ತದೆ ಎಂದು ಕಂದಾಯ ಇಲಾಖೆಯ ವಿಪತ್ತು ನಿರ್ವಹಣೆ ವಿಭಾಗದ ಉಪ ಕಾರ್ಯದರ್ಶಿ ಟಿ. ನಾರಾಯಣಪ್ಪ ತಿಳಿಸಿದರು.
ಕಂದಾಯ ಇಲಾಖೆಯ ಆಶ್ರಯದಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಶುಕ್ರವಾರ ನಡೆದ ‘ಚಂಡಮಾರುತ ಮತ್ತು ಪ್ರವಾಹ ವಿಪತ್ತು ನಿರ್ವಹಣೆ' ಕಾರ್ಯಾಗಾರದಲ್ಲಿ ಮಾತನಾಡಿ, ‘ದಕ್ಷಿಣ ಕನ್ನಡ, ಉಡುಪಿ ಹಾಗೂ ಕಾರವಾರ ಜಿಲ್ಲೆಗಳಲ್ಲಿ ಈ ಯೋಜನೆಯಡಿ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು’ ಎಂದರು.
‘ಈ ಯೋಜನೆಗೆ ವಿಶ್ವಬ್ಯಾಂಕ್ ನೆರವು ನೀಡಿದೆ. ರಾಜ್ಯ ಸರ್ಕಾರ ₹128 ಕೋಟಿ ಮಂಜೂರು ಮಾಡಿದೆ. ಎರಡನೇ ಹಂತದ ಯೋಜನೆಯನ್ನೂ ಅನುಷ್ಠಾನ ಮಾಡಲಾಗುತ್ತದೆ’ ಎಂದು ಅವರು ಹೇಳಿದರು.
ವಿಪತ್ತು ನಿರ್ವಹಣಾ ತಜ್ಞ ಡಾ. ವಿಶ್ವನಾಥ್, ‘ಮಾನವ ನಿರ್ಮಿತ ಬರ ಮತ್ತು ನೆರೆಯಿಂದ ಹೆಚ್ಚು ವಿಪತ್ತುಗಳು ಸಂಭವಿಸುತ್ತಿವೆ’ ಎಂದು ಹೇಳಿದರು.