ಹುಣಸೂರು: ನಾಗರಹೊಳೆ ಅರಣ್ಯದಂಚಿನ ವೀರನಹೊಸಹಳ್ಳಿ ವಲಯದ ಶೆಟ್ಟಹಳ್ಳಿ ಅರಣ್ಯ ಪ್ರದೇಶದ ನೇಗತ್ತೂರು ಗ್ರಾಮದ ಬಳಿ ಉರುಳಿಗೆ ಸಿಲುಕಿದ್ದ ಹುಲಿಯನ್ನು ಅರಣ್ಯ ಇಲಾಖೆ ಅಧಿಕಾರಿಗಳು, ಪಶುವೈದ್ಯರು ಶುಕ್ರವಾರ ರಕ್ಷಿಸಿದ್ದಾರೆ.
ಆನೆ ಕಂದಕಕ್ಕೆ ಹೊಂದಿಕೊಂಡಿರುವ ಪೊದೆಯಲ್ಲಿ ಬೇಟೆಗಾರರು ಉರುಳು ಹಾಕಿದ್ದರು. ಇದಕ್ಕೆ ಸಿಲುಕಿದ 3 ವರ್ಷ ವಯಸ್ಸಿನ ಗಂಡು ಹುಲಿಯು ಸಾವು ಬದುಕಿನ ನಡುವೆ ಒದ್ದಾಡುತ್ತಿತ್ತು. ಇದನ್ನು ಗಮನಿಸಿದ ರೈತರು ಅರಣ್ಯ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಬಂದ ಸಿಬ್ಬಂದಿ ರಕ್ಷಿಸಿದರು.
ಪಶುವೈದ್ಯ ಡಾ.ಮುಜಿಬುಲ್ ರೆಹಮಾನ್ ಅವರು ಅರಿವಳಿಕೆ ಚುಚ್ಚುಮದ್ದು ನೀಡಿದರು. ನಂತರ, ನಿಧಾನವಾಗಿ ಉರುಳಿನಿಂದ ಬೇರ್ಪಡಿಸಿ ಸೆರೆ ಹಿಡಿಯಲಾಯಿತು ಎಂದು ಮೂಲಗಳು ತಿಳಿಸಿವೆ.
ಈ ಹುಲಿಯು ಕಳೆದ ಕೆಲವು ದಿನಗಳಿಂದ ಅಲ್ಲಲ್ಲಿ ಕಾಣಿಸಿಕೊಂಡು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಭೀತಿ ಮೂಡಿಸಿತ್ತು. ಸೆರೆ ಹಿಡಿಯಲು ಬೋನು ಇಡಲಾಗಿತ್ತು.