ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದ್ದ ಟಿಪ್ಪು ಜಯಂತಿಯು ಶನಿವಾರ ಬಂದ್, ನಿಷೇಧಾಜ್ಞೆ ನಡುವೆ ಮುಕ್ತಾಯಗೊಂಡಿತು.
ಜಯಂತಿ ವಿರೋಧಿಸಿ ಕರೆ ನೀಡಿದ್ದ ‘ಕೊಡಗು ಬಂದ್’ ಬಹುತೇಕ ಪೂರ್ಣವಾಯಿತು. ಇಡೀ ದಿನ ಖಾಸಗಿ ಬಸ್ಗಳು ರಸ್ತೆಗೆ ಇಳಿಯಲಿಲ್ಲ. ಆಟೊ ಸಂಚಾರವೂ ವಿರಳವಾಗಿತ್ತು. ಅಂಗಡಿ ಮುಂಗಟ್ಟುಗಳು ಮುಚ್ಚಿದ್ದವು. ಕೆಎಸ್ಆರ್ಟಿಸಿ ಬಸ್ಗಳು ಮಾತ್ರ ಎಂದಿನಂತೆ ಸಂಚರಿಸಿದವು.
ನಗರದ ಹಳೇ ಕೋಟೆ ವಿಧಾನ ಸಭಾಂಗಣದಲ್ಲಿ ಪೊಲೀಸ್ ಭದ್ರತೆಯಲ್ಲಿ 20 ನಿಮಿಷದಲ್ಲೇ ಕಾರ್ಯಕ್ರಮ ಅಂತ್ಯವಾಯಿತು. ಆಹ್ವಾನ ಪತ್ರಿಕೆ ನೀಡಿದ್ದವರಿಗೆ ಮಾತ್ರ ಪ್ರವೇಶವಿತ್ತು. ಹೀಗಾಗಿ, ಕೆಲವೇ ಮಂದಿ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್, ವಿಧಾನ ಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ ಗೈರಾಗಿದ್ದರು.
ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರು ಟಿಪ್ಪು ಹಾಗೂ ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ಅದಕ್ಕೆ ಕಾಂಗ್ರೆಸ್ ಮುಖಂಡರು ಆಕ್ಷೇಪಿಸಿದರು. ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ತಕ್ಷಣವೇ ಬಿಜೆಪಿ ಮುಖಂಡರನ್ನು ಪೊಲೀಸರು ವಶಕ್ಕೆ ಪಡೆದು ಬಳಿಕ ಬಿಡುಗಡೆಗೊಳಿಸಿದರು. ವಿರಾಜಪೇಟೆಯಲ್ಲಿ ಶಾಸಕ ಕೆ.ಜಿ. ಬೋಪಯ್ಯ ಅವರನ್ನು ವಶಕ್ಕೆ ಪಡೆಯಲಾಗಿತ್ತು.
ಮಡಿಕೇರಿ 87, ಸೋಮವಾರಪೇಟೆ 50, ವಿರಾಜಪೇಟೆ 20, ಕುಶಾಲನಗರ 15 ಮಂದಿ ಬಿಜೆಪಿ, ಹಿಂದೂ ಜಾಗರಣಾ ವೇದಿಕೆ ಹಾಗೂ ಬಜರಂಗದಳದ ಕಾರ್ಯಕರ್ತರನ್ನು ಬಂಧಿಸಿ ಬಿಡುಗಡೆ ಮಾಡಲಾಯಿತು. ನಗರದ ಓಂಕಾರೇಶ್ವರ ದೇಗುಲದಲ್ಲಿ ಕುಟ್ಟಪ್ಪ ಆತ್ಮಕ್ಕೆ ಶಾಂತಿ ಕೋರಿ ವಿಶೇಷ ಪೂಜೆ ನೆರವೇರಿತು.