ಚಿಕ್ಕಮಗಳೂರು: ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ (ಎನ್ಎಚ್)–173 ವಿಸ್ತರಣೆಗೆ ರಸ್ತೆಯ ಇಕ್ಕೆಲದ ಮರಗಳ ಮಾರಣಹೋಮ ಭರದಿಂದ ಸಾಗಿದೆ. ಈಗ ಎರಡನೇ ಹಂತದಲ್ಲಿ 2,318 ಮರಗಳ ಕಡಿಯಲು ಅರಣ್ಯ ಇಲಾಖೆ ಅಸ್ತು ನೀಡಿದೆ.
ಮೊದಲ ಹಂತದಲ್ಲಿ 1,137 ಮರಗಳನ್ನು ಕಡಿಯಲು ಅನುಮೋದನೆ ನೀಡಿದ್ದು, ಈ ಪೈಕಿ, 816 ವೃಕ್ಷಗಳನ್ನು ಕಡಿಯಲಾಗಿದೆ. ಎರಡನೇ ಹಂತದ ಕಡಿಯುವ ಕಾರ್ಯ ಆರಂಭವಾಗಿದೆ. ಈ ರಸ್ತೆಯಲ್ಲಿ ಈಗ ಆಲ, ಅರಳಿ, ಮಾವು, ಬೇವು, ಹುಣಸೆ, ಹೊನ್ನೆ ಮೊದಲಾದವುಗಳ ಹನನದ್ದೇ ಸದ್ದು. ಮರಗಳು ‘ಮಾಯ’ವಾಗಿ ಮಾರ್ಗ ಬಟಾಬಯಲಾಗುತ್ತಿದೆ.
ಕಡಿಯಲಾದ ಒಂದು ಮರದ ಬದಲಿಗೆ 10 ಗಿಡಗಳನ್ನು ನೆಟ್ಟು ಪೋಷಿಸಬೇಕೆಂಬ ಮಾರ್ಗಸೂಚಿ ಇದೆ. ಆದರೆ, ಗಿಡಗಳನ್ನು ಬೆಳೆಸಲು ಅರಣ್ಯ ಇಲಾಖೆ ಸಿದ್ಧತೆ ಮಾಡಿಕೊಂಡಂತಿಲ್ಲ. ಅದರಿಂದ ಜಾಗತಿಕ ತಾಪಮಾನ ಏರುತ್ತದೆ. ಕಡಿದ ಮರಗಳಿಗೆ ಪರ್ಯಾಯವಾಗಿ ಗಿಡಗಳನ್ನು ನೆಟ್ಟು ಪೋಷಿಸಲೇಬೇಕು ಎಂಬುದು ಪರಿಸರಾಸಕ್ತರ ಒತ್ತಾಯ.
‘ರಾಷ್ಟ್ರೀಯ ಹೆದ್ದಾರಿ ಉಪವಿಭಾ ಗದ ವತಿಯಿಂದ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ. ಕಡೂರಿನಿಂದ– ಮೂಡಿಗೆರೆ ಹ್ಯಾಂಡ್ ಪೋಸ್ಟ್ವರೆಗಿನ 72 ಕಿ.ಮೀ ಉದ್ದದ ಈ ರಸ್ತೆಯ ಅಗಲ 14 ಮೀಟರ್ (ಶೋಲ್ಡರ್ ಸಹಿತ) ವಿಸ್ತರಣೆ ಮಾಡಲಾಗುತ್ತಿದೆ. ಈಗ ಕಡೂರಿನಿಂದ ಚಿಕ್ಕಮಗಳೂರು ತಾಲ್ಲೂಕಿನ ಮೂಗ್ತಿಹಳ್ಳಿವರೆಗೆ (45 ಕಿ.ಮೀ) ವಿಸ್ತರಣೆ ನಿಟ್ಟಿನಲ್ಲಿ ₹ 204 ಕೋಟಿ ಅನುದಾನ ಮಂಜೂರಾಗಿದೆ’ ಎಂದು ಉಪ ವಿಭಾಗದ ಎಂಜಿನಿಯರೊಬ್ಬರು ತಿಳಿಸಿದರು.
‘ಕಾಮಗಾರಿ ಬಳಿಕ ಸಸಿ ನೆಟ್ಟು ಪೋಷಣೆ’
ಮರಗಳ ಕಡಿಯುವ ನಿಟ್ಟಿನಲ್ಲಿ ಪ್ರಕ್ರಿಯೆ ನಡೆಸಿ ಅನುಮೋದನೆ ನೀಡಲಾಗಿದೆ. ಪರ್ಯಾಯವಾಗಿ ಗಿಡಗಳನ್ನು ನೆಟ್ಟು ಬೆಳೆಸಲಾಗುವುದು ಎಂದು ಚಿಕ್ಕಮಗಳೂರು ಉಪ ಅರಣ್ಯಸಂರಕ್ಷಣಾಧಿಕಾರಿ ಎನ್.ಎಚ್. ಜಗನ್ನಾಥ್ ‘ಪ್ರಜಾವಾಣಿ’ಗೆ ತಿಳಿಸಿದರು.
‘ರಸ್ತೆ ಪಕ್ಕದ ಜಮೀನಿನಲ್ಲಿ ನೆಟ್ಟ ಗಿಡದ ಫಲ (ಹಣ್ಣು, ಕಾಯಿ...) ಆದಾಯ ರೈತನಿಗೆ, ವಾರಸುದಾರಿಕೆ ಇಲಾಖೆಗೆ ‘ಸೂತ್ರ’ ಅನ್ವಯಿಸಲಾಗುವುದು. ಗಿಡ ನೆಡುವ ಕಾರ್ಯವನ್ನು ಶೀಘ್ರದಲ್ಲಿ ಕೈಗೆತ್ತಿಕೊಳ್ಳಲಾಗುವುದು’ ಎಂದು ತಿಳಿಸಿದರು.