ಹೊಸಪೇಟೆ: ತುಂಗಭದ್ರಾ ಜಲಾಶಯದಿಂದ ನದಿಗೆ ಅಪಾರ ಪ್ರಮಾಣದಲ್ಲಿ ನೀರು ಹರಿಸುತ್ತಿರುವ ಕಾರಣ ತಾಲ್ಲೂಕಿನ ಕೆಲ ಸ್ಮಾರಕಗಳು ನೀರಿನಲ್ಲಿ ಮುಳುಗಡೆಯಾಗಿವೆ.
ಹಂಪಿಯ ಪುರಂದರದಾಸರ ಮಂಟಪ, ವಿಜಯನಗರ ಕಾಲದ ಕಾಲು ಸೇತುವೆ ಹಾಗೂ ವಿರೂಪಾಕ್ಷ ದೇಗುಲಕ್ಕೆ ಹೊಂದಿಕೊಂಡಂತೆ ಇರುವ ಪಿತೃಪ್ರಧಾನ ಮಂಟಪಗಳು ನೀರಿನಲ್ಲಿ ಸಂಪೂರ್ಣ ಮುಳುಗಿವೆ.
ನಾಲ್ಕು ವರ್ಷಗಳ ನಂತರ ನದಿಗೆ ನೀರು ಬಿಡುತ್ತಿರುವ ಕಾರಣ ಜೀವಕಳೆ ಬಂದಿದೆ. ವಿವಿಧ ಕಡೆಗಳಿಂದ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ.
ಗುರುವಾರ ಸಂಜೆ ಐವತ್ತು ಸಾವಿರ ಕ್ಯುಸೆಕ್ಗೂ ಅಧಿಕ ನೀರು ಹರಿಸಲು ನಿರ್ಧರಿಸಲಾಗಿದ್ದು, ನದಿ ಪಾತ್ರದ ಜನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ತುಂಗಭದ್ರಾ ಜಲಾಶಯ ಆಡಳಿತ ಮಂಡಳಿ ತಿಳಿಸಿದೆ. ಸದ್ಯ ನದಿಯಲ್ಲಿ ತೆಪ್ಪ, ದೋಣಿ ಸಂಚಾರ ಸ್ಥಗಿತಗೊಂಡಿದೆ. ನದಿ ದಾಟಿ ಹೋಗುವವರು ಅನ್ಯ ಮಾರ್ಗದ ಮೂಲಕ ತೆರಳುತ್ತಿದ್ದಾರೆ.