ರಾಯಚೂರು: ಜಿಲ್ಲೆಯ ದೇವದುರ್ಗ ತಾಲ್ಲೂಕಿನ ಸೋಮನಮರಡಿ ಗ್ರಾಮದ ಭೀಮಣ್ಣ ನಾಯಕ ಅವರ ಬ್ಯಾಂಕ್ ಖಾತೆಗೆ ಯುಪಿಐ ತಂತ್ರಾಂಶ (ಅ್ಯಪ್) ಮೂಲಕ ಕನ್ನ ಹಾಕಿ ಅಕ್ರಮವಾಗಿ ₹2,22,879 ಹಣ ದೋಚಲಾಗಿದೆ.
ಹಣ ವರ್ಗಾಯಿಸಿಕೊಂಡಿದ್ದ ಆರೋಪಿಗಳಾದ ತುಮಕೂರು ಜಿಲ್ಲೆ ಊರ್ಡಿಗೆರೆ ಗ್ರಾಮದ ಕಿರಣಕುಮಾರ್ ವೆಂಕಟೇಶ ಮತ್ತು ಹನುಮಂತರಾಜು ರಂಗಣ್ಣ ಅವರನ್ನು ರಾಯಚೂರು ಪೊಲೀಸರು ಬಂಧಿಸಿ ಸೋಮವಾರ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕಳೆದ ಜನವರಿ 30 ರಿಂದ ಫೆಬ್ರುವರಿ 4 ರ ಅವಧಿಯಲ್ಲಿ ಹಣ ವರ್ಗಾವಣೆಯಾಗಿತ್ತು. ಕೂಡಲೇ ಎಚ್ಚೆತ್ತ ಭೀಮಣ್ಣ ಅವರು ದೇವದುರ್ಗದ ಸೈಬರ್ ಠಾಣೆಗೆ ದೂರು ಸಲ್ಲಿಸಿದ್ದರು.
ಪೊಲೀಸರು ಆರೋಪಿಗಳನ್ನು ಪತ್ತೆಮಾಡಿ ಅವರ ಖಾತೆಯನ್ನು ಸ್ಥಗಿತಗೊಳಿಸಿ, ಆರೋಪಿಗಳ ಎರಡು ಮೊಬೈಲ್ ಜಪ್ತಿ ಮಾಡಿಕೊಂಡು ತನಿಖೆ ಮುಂದುವರಿಸಿದ್ದಾರೆ.