ಬಳ್ಳಾರಿ: ರಾಜ್ಯದಲ್ಲಿ ನಡೆಯಲಿರುವ ಉಪಚುನಾವಣೆಕಮ್ಯುನಿಸ್ಟ್ ಪಕ್ಷ ಕಾಂಗ್ರೆಸ್ಗೆಸಹಕಾರ ನೀಡಲಿದೆ. ಸಿಪಿಐಎಂ ಜೊತೆಗೂ ಚರ್ಚಿಸಿದ್ದು ಅವರ ಬೆಂಬಲವನ್ನು ಕಾಂಗ್ರೆಸ್ ನಿರೀಕ್ಷಿಸುತ್ತಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ ಗುಂಡೂರಾವ್ ತಿಳಿಸಿದರು.
ಕಮ್ಯುನಿಸ್ಟ್ ಪಕ್ಷ ಶಿಸ್ತಿನ ಪಕ್ಷ. ಪಕ್ಷದ ಸದಸ್ಯರಾಗಿರುವ ಕಾರ್ಮಿಕರ ಬೆಂಬಲವೂ ನಮಗೆ ದೊರಕಲಿದೆ. ಸುಮಾರು 50 ಸಾವಿರ ಮತಗಳು ದೊರಕುವ ಭರವಸೆ ಇದೆ ಎಂದರು.
ಪ್ರಧಾನಿ ನರೇಂದ್ರಮೋದಿಯವರ ಅತ್ಯಾಪ್ತರಾದ ಸಿಬಿಐ ವಿಶೇಷ ನಿರ್ದೇಶಕ ಆಸ್ತಾನವಿರುದ್ಧ ಪ್ರಕರಣ ದಾಖಲಾಗಿದೆ. ಅವರನ್ನು ಮಹತ್ವದ ಭ್ರಷ್ಟಾಚಾರ ಪ್ರಕರಣಗಳ ತನಿಖೆ ನಡೆಸಲು ನಿಯೋಜಿಸಲಾಗಿತ್ತು ಎಂದು ದೂರಿದರು. ಸಿಬಿಐ ನಿರ್ದೇಶಕರನ್ನು ಹುದ್ದೆ ಯಿಂದ ತೆಗೆಯಲು ಪ್ರಧಾನಿಗೆ ಅಧಿಕಾರವಿಲ್ಲ. ಆದರೂ ಅದನ್ನು ಮೋದಿ ಮಾಡಿದ್ದಾರೆ ಎಂದರು.
ಮೋದಿಯವರೊಂದಿಗೆ ವಿದೇಶ ಪ್ರವಾಸದಲ್ಲಿ ಪಾಲ್ಗೊಂಡವರ ಮಾಹಿತಿಯನ್ನು ಕೊಡಲಾಗುವುದಿಲ್ಲ ಎಂದು ಕೇಂದ್ರ ಮಾಹಿತಿ ಆಯೋಗಕ್ಕೆ ಪ್ರಧಾನಿ ಕಚೇರಿ ಹೇಳಿರುವುದು ಸರ್ವಾಧಿಕಾರಿ ಧೋರಣೆ ಎಂದರು.ಭ್ರಷ್ಟಾಚಾರ ಪ್ರಕರಣಗಳಲ್ಲಿ ಪಾಲ್ಗೊಂಡವರೇ ಮೋದಿಯವರೊಂದಿಗೆ ಪ್ರವಾಸ ಮಾಡಿರಬಹುದು ಎಂಬ ಅನುಮಾನವೂ ಇದರಿಂದ ಮೂಡುತ್ತದೆ ಎಂದರು.
ಅ.31ರಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಪ್ರಚಾರ ನಡೆಸಲಿದ್ದಾರೆ ಎಂದರು.
ಸಿಪಿಐ ಮುಖಂಡ ಲೋಕೇಶ್, ಕೋಮುವಾದಿ ಪಕ್ಷವಾದ ಬಿಜೆಪಿಯನ್ನು ಅಧಿಕಾರದಿಂದ ದೂರ ಇಡಲೆಂದೇ ಕಾಂಗ್ರೆಸ್ ಅಭ್ಯರ್ಥಿಯನ್ನು ಬೆಂಬಲಿಸಲಾಗುವುದು ಎಂದು ಹೇಳಿದರು. ಮೊಳಕಾಲ್ಮೂರು ಕ್ಷೇತ್ರದಲ್ಲಿ ಅವಧಿಯನ್ನು ಪೂರ್ಣಗೊಳಿಸುವುದಾಗಿ ಶಾಸಕ ಬಿ.ಶ್ರೀರಾಮುಲು ಪ್ರಮಾಣಪತ್ರ ಸಲ್ಲಿಸುತ್ತಾರೆಯೇ ಎಂದು ಪ್ರಶ್ನಿಸಿದರು.
ಎಐಟಿಯುಸಿ ರಾಜ್ಯ ಅಧ್ಯಕ್ಷ ಅನಂತಸುಬ್ಬರಾಯ, ಜಿಲ್ಲಾ ಕಾರ್ಯದರ್ಶಿ ನಾಗಭೂಷಣ, ಎಚ.ಕೆ.ರಾಮಚಂದ್ರ, ಅನಿಲ್ಲಾಡ್, ನಿವೃತ್ತ ಐಜಿಪಿ ಶಿವಪ್ರಸಾದ್, ಎಐಸಿಸಿ ಮುಖಂಡ ಸೂರಜ್ ಹೆಗಡೆ ಇದ್ದರು.