ಬೆಂಗಳೂರು:ಕಾಂಗ್ರೆಸ್ ಶಾಸಕ ಉಮೇಶ್ ಜಾಧವ್ ಅವರು ಸಲ್ಲಿಸಿರುವ ರಾಜೀನಾಮೆ ವಿಚಾರವಾಗಿ ಗುರುವಾರ ಪ್ರತಿಕ್ರಿಯಿಸಿರುವ ವಿಧಾನಸಭಾಧ್ಯಕ್ಷ ಕೆ.ಆರ್.ರಮೇಶ್ಕುಮಾರ್ ಅವರು, ವಿಚಾರಣೆ ಬಳಿಕ ಕಾನೂನು ಅನ್ವಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.
ಉಮೇಶ್ ಜಾಧವ್ ಮಾರ್ಚ್ 4ರಂದು ನನ್ನ ಹಳ್ಳಿಗೆ ಬಂದು ರಾಜೀನಾಮೆ ನೀಡಿದರು. ಅವತ್ತು ಶಿವರಾತ್ರಿ ರಜೆ ಇತ್ತು. ಅವರಿಗೆ ಕೆಲವು ವಿವರಣೆ ಕೇಳಿ ಈಗ ಒಂದು ಪತ್ರ ಬರೆದಿದ್ದೇವೆ. ವಿಪ್ ಉಲ್ಲಂಘನೆಯದು ಬೇರೆ ವಿಚಾರ. ಈಗಾಗಲೇ ನಾಲ್ಕು ಕಾಂಗ್ರೆಸ್ ಶಾಸಕರ ಮೇಲೆ ದೂರು ಬಂದಿದೆ. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರು ದೂರು ನೀಡಿದ್ದಾರೆ. ಮಾರ್ಚ್ 12ರಂದು 3 ಗಂಟೆಗೆ ವಿಚಾರಣೆ ಇದೆ. ಕಾನೂನು ಹೇಗೆ ಹೇಳುತ್ತೋ ಹಾಗೆ ಮಾಡುತ್ತೇವೆ. ನಾವೀಗ ನಾಲ್ಕು ಜನರಿಗೂ ನೋಟಿಸ್ ನೀಡಿದ್ದೇವೆ. ಅವರು ಸಮಜಾಯಿಷಿ ನೀಡುತ್ತಿದ್ದಾರೆ. ಒಬ್ಬರು ಬಂದು ರಾಜೀನಾಮೆ ನೀಡಿದ್ದಾರೆ ಎಂದು ಹೇಳಿದರು.
ರೂಲ್ಸ್ ಬುಕ್ ಏನು ಹೇಳುತ್ತೋ ಹಾಗೆ ಮಾಡುತ್ತೇವೆ. ಯಾರೇ ರಾಜೀನಾಮೆ ಕೊಟ್ಟರೂ ಸ್ವೀಕರಿಸುತ್ತೇನೆ ಎಂದಿದ್ದೆ. ಆದರೆ, ಹಾಗೆಯೆ ಅಂಗೀಕರಿಸಲಾಗುವುದಿಲ್ಲ. ಸ್ವೀಕಾರ ಮಾಡುವುದು ಬೇರೆ ಅಂಗೀಕರಿಸುವುದು ಬೇರೆ ಎಂದರು.
ಎಸ್ಐಟಿ ರಚನೆ: ಪತ್ರ ಬರೆಯುವೆ ಎಸ್.ಐಟಿ ರಚನೆ ವಿಳಂಬ ವಿಚಾರ ವಾಗಿ ಪ್ರತಿಕ್ರಿಯಿಸಿದ ಅವರು, ರಮೇಶ್ ಕುಮಾರ್, ಯಾರು ತಲೆ ಕೆಡಿಸಿಕೊಂಡರೂ ಕೆಡಿಸಿಕೊಳ್ಳದಿದ್ದರೂ ನನಗೆ ಸಂಬಂಧಪಟ್ಟಿದ್ದಲ್ಲ. ನಾನು ಪೀಠದಿಂದ ಒಂದು ಸಲಹೆ ಕೊಟ್ಟಿದ್ದೇನೆ. ಈ ಕುರಿತಂತೆ ಅವರಿಗೆ ಇಂದು ಮತ್ತೆ ಪತ್ರ ಬರೆಯುತ್ತೇನೆ ಎಂದರು.
ಎಸ್ಐಟಿ ರಚಿಸಬಾರದೆಂದೇನೂ ಯಾರಿಗೂ ಇಲ್ಲ. ಚುನಾವಣೆ ಇರುವುದರಿಂದ ಸರ್ಕಾರವೂ ಬ್ಯುಸಿ ಇರಬಹುದು ಎಂದು ಹೇಳಿದರು.